ವಾರಾಂತ್ಯ ಕರ್ಫ್ಯೂ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್ಸು ಕನಿಷ್ಠ ಓಡಾಟ

ಪುತ್ತೂರು, ಜ.7: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಪುತ್ತೂರು, ಸುಳ್ಯ, ಮಡಿಕೇರಿ, ಧರ್ಮಸ್ಥಳ, ಬಿ.ಸಿ. ರೋಡ್ ಘಟಕಗಳ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಗಳು ಕನಿಷ್ಠ ಓಡಾಟ ನಡೆಸಲಿವೆ. ಪ್ರಯಾಣಿಕರ ಲಭ್ಯತೆ ಇರುವ ಮಾರ್ಗಸೂಚಿಗಳಲ್ಲಿ ಮಾತ್ರ ಈ ಬಸ್ಸು ಓಡಾಡಲಿದೆ. ಶನಿವಾರ ಮತ್ತು ರವಿವಾರದಂದು ಸರಕಾರಿ ಆದೇಶಕ್ಕೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಬಸ್ಗಳ ಓಡಾಟವಿರುತ್ತದೆ ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅತೀ ಹೆಚ್ಚು ಪ್ರಯಾಣಿಕರು ಓಡಾಟ ನಡೆಸುವ ಪುತ್ತೂರು-ಸ್ಟೇಟ್ಬ್ಯಾಂಕ್, ಪುತ್ತೂರು-ಸುಳ್ಯ, ಪುತ್ತೂರು-ವಿಟ್ಲ, ಪುತ್ತೂರು-ಉಪ್ಪಿನಂಗಡಿ ಮಾರ್ಗಸೂಚಿಗಳಲ್ಲಿ ಬೆಳಗ್ಗಿನಂದ ಸಂಜೆಯವರೆಗೆ ಪ್ರಯಾಣಿಕರ ಲಭ್ಯತೆಯನ್ನು ಗಮನಿಸಿಕೊಂಡು ಬಸ್ಗಳನ್ನು ಓಡಾಟ ನಡೆಸಲಾಗುತ್ತಿದೆ. ಪ್ರಯಾಣಿಕರು ಭರ್ತಿಯಾದ ಸಂದರ್ಭ ಮಾತ್ರ ನಿಗದಿತ ಬಸ್ ನಿಲ್ದಾಣದಿಂದ ಬಸ್ಗಳನ್ನು ಹೊರಡಿಸಲಾಗುವುದು. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ವಾರಾಂತ್ಯ ಕರ್ಫ್ಯೂ ಇರುವುದರಿಂದ ಶುಕ್ರವಾರ ರಾತ್ರಿ ಗ್ರಾಮಾಂತರ ಪ್ರದೇಶದಲ್ಲಿ ತಂಗುವ ಬಸ್ಗಳು ಶನಿವಾರ ಘಟಕವನ್ನು ಸೇರುತ್ತವೆ. ಸೋಮವಾರ ಬೆಳಗ್ಗೆ ಗ್ರಾಮಾಂತರ ಮಾರ್ಗಸೂಚಿಗಳಲ್ಲಿ ಓಡಾಟ ನಡೆಸುವ ಬಸ್ಗಳನ್ನು ಆಯಾ ಊರುಗಳಿಗೆ ಬಿಟ್ಟು ಸೋಮವಾರ ಬೆಳಗ್ಗೆ ಪ್ರಯಾಣಿಕರ ಅನುಕೂಲಕ್ಕೆ ಬಸ್ ಹೊರಡುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಆದಾಯ ನಷ್ಟವನ್ನು ತಪ್ಪಿಸುವ ರೀತಿಯಲ್ಲಿ ಓಡಾಟ ನಡೆಸಲು ತೀರ್ಮಾನಿಸಲಾಗಿದೆ. ಮುಂಗಡ ಟಿಕೆಟ್ ಕಾಯ್ದಿರಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿಗಳಿಂದ ಹೊರಡುವ ರಾತ್ರಿ ಬಸ್ಗಳ ಓಡಾಟಕ್ಕೆ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲ. ಹಾಲಿ ವಾರದ ಇತರ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ರಾತ್ರಿ ಬಸ್ಗಳ ಓಡಾಟಕ್ಕೆ ಅನುಮತಿಸಲಾಗಿದೆ. ರಾತ್ರಿ ಬಸ್ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ವಿಭಾಗ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.







