ತಬ್ಲೀಘಿಗಳಿಂದ ಮೊದಲನೇ ಅಲೆ, ಕಾಂಗ್ರೆಸ್ಸಿಗರಿಂದ ಮೂರನೇ ಅಲೆ ಎಂದ ಬಿಜೆಪಿ !
ಬೆಂಗಳೂರು: ''ತಬ್ಲೀಘಿಗಳು ಕೋವಿಡ್ ನ ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ'' ಎಂದು ಬಿಜೆಪಿ ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ''ಕೊರೋನ ಸ್ಪ್ರೆಡರ್ ಡಿಕೆ ಸೋದರರೆ, ನಿಮ್ಮ ಸುಳ್ಳಿನಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧಗಂಟೆಯ ನಡಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ ಪುಢಾರಿಗಳು ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೋನಾ ಹಬ್ಬಿಸುವುದು ನಿಮ್ಮ ಉದ್ದೇಶವೇ?'' ಎಂದು ಪ್ರಶ್ನಿಸಿದೆ.
ಬೆಂಗಳೂರಿಗೆ ನೀರು ಹಂಚುವುದಕ್ಕಾಗಿ ಈ ಪಾದಯಾತ್ರೆ ಎಂದು ಸುಳ್ಳಿನಜಾತ್ರೆ ಮಾಡುತ್ತಿರುವ ಕಾಂಗ್ರೆಸ್, ವಾಸ್ತವದಲ್ಲಿ ಬೆಂಗಳೂರಿಗೆ ಕೋವಿಡ್ ರಫ್ತು ಮಾಡುತ್ತಿದೆ. ಈ ಮೂಲಕ ಕೋವಿಡ್ ಸೋಂಕಿತ ಕಾಂಗ್ರೆಸಿಗರು ಊರಿಗೆಲ್ಲ ಸೋಂಕು ಹಂಚುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣವಾದರೆ ಕಾಂಗ್ರೆಸ್ ತಬ್ಲಿಘಿಗಳೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದೆ.
ಕೊರೋನ ಮೊದಲನೇ ಅಲೆ ಸಂದರ್ಭದಲ್ಲಿ ದಿಲ್ಲಿಯ ತಬ್ಲೀಘಿ ಮರ್ಕಝ್ ನಿಂದಾಗಿಯೇ ದೇಶಾದ್ಯಂತ ಕೊರೊನ ಹರಡುತ್ತಿದೆ ಎಂದು ಟಿವಿ ಚಾನಲ್ ಗಳು, ಬಲಪಂಥೀಯರು ವ್ಯಾಪಕ ಅಪಪ್ರಚಾರ ನಡೆಸಿದ್ದರು. ಆದರೆ ತಬ್ಲೀಗಿಗಳ ವಿರುದ್ಧ ಮಾಡಿದ್ದ ಕೊರೋನ ಹರಡಿದ ಆರೋಪಗಳು ಒಂದೊಂದಾಗಿ ದೇಶದ ನ್ಯಾಯಾಲಯಗಳಲ್ಲಿ ಸುಳ್ಳೆಂದು ಸಾಬೀತಾಗಿವೆ. ಅವರನ್ನು ನ್ಯಾಯಾಲಯಗಳು ದೋಷಮುಕ್ತಗೊಳಿಸಿವೆ.
ಈಗ ದೇಶದ ಹಾಗು ರಾಜ್ಯದ ಆಡಳಿತಾರೂಢ ಪಕ್ಷವೇ ನೇರವಾಗಿ ಈ ರೀತಿಯ ಆಧಾರರಹಿತ, ಕೋಮು ಪ್ರಚೋದಕ ಆರೋಪ ಮಾಡಿ ವಿವಾದ ಸೃಷ್ಟಿಸಿದೆ.
ಕಾಂಗ್ರೆಸ್ ಪಾದಯಾತ್ರೆ = ತಬ್ಲಿಘಿ
— BJP Karnataka (@BJP4Karnataka) January 11, 2022
ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.#ಸುಳ್ಳಿನಜಾತ್ರೆ #ಕೋವಿಡ್ಯಾತ್ರೆ