ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು: ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ್
'ಮೀಫ್' ವತಿಯಿಂದ ಶೈಕ್ಷಣಿಕ ಕಾರ್ಯಾಗಾರ
![ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು: ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ್ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕು: ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ್](https://www.varthabharati.in/sites/default/files/images/articles/2022/01/11/321014-1641909084.jpg)
ಮಂಗಳೂರು, ಜ.11: ಶಿಕ್ಷಣವು ಸಮಾಜದ ಪ್ರತಿಬಿಂಬವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ನೀಡುವ ಗುರಿಯನ್ನು ಎಲ್ಲರೂ ಹೊಂದಿರಬೇಕಿದೆ. ಕಲಿಯಿರಿ, ಕಲಿಯಿರಿ ಎಂದು ಎಷ್ಟೇ ಒತ್ತಾಯಿಸಿದರೂ ಕೂಡ ಮಕ್ಕಳು ಕಲಿಯಲಾರರು. ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದರೆ ಮಾತ್ರ ಮಕ್ಕಳು ಚೆನ್ನಾಗಿ ಕಲಿಯಲು ಸಾಧ್ಯ ಎಂದು ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ ಕೆ. ಅಭಿಪ್ರಾಯಪಟ್ಟರು.
ಮುಸ್ಲಿಮ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ಫೆಡರೇಶನ್ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜಿನ ಆಡಿಟೋರಿಯಂನಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳ ಮನೋಭಾವ ಅರಿತುಕೊಳ್ಳಬೇಕಿದೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನ ಮಾಡಬೇಕಿದೆ. ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳ ಪಾಲಿಗೆ ಎಸೆಸೆಲ್ಸಿಯು ಪ್ರಮುಖ ಹಂತವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಎಸೆಸೆಲ್ಸಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಹಜ ಕಲಿಕೆಯ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದಲೂ ಸಕಾಲಕ್ಕೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಅನಿವಾರ್ಯತೆ ಇದೆ ಎಂದು ಸುಧಾಕರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಮಾತನಾಡಿ 'ಮೀಫ್' ಸಂಸ್ಥೆಯು ಮಾಜಿ ಸಚಿವ ಬಿ.ಎ. ಮೊಹಿದಿನ್ರ ಕನಸಿನ ಕೂಸಾಗಿದೆ. 20 ವರ್ಷದ ಹಿಂದೆ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಅಧೀನದಲ್ಲಿ ಇದೀಗ 130 ಮುಸ್ಲಿಂ ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಮುದಾಯದ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಕೂಡ ಮೀಫ್ ಹೊಂದಿದೆ. ಅದರ ಭಾಗವಾಗಿ ಅಲ್ಲಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಮತ್ತು ಉಡುಪಿಯಲ್ಲೂ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಅತಿಥಿಯಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ಪೆರ್ಮನ್ನೂರು ಇದರ ಅಧ್ಯಕ್ಷ ಎ.ಎಚ್.ಮಹಮೂದ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದಿರೆಯ ಜೈನ್ ಕಾಲೇಜಿನ ಪ್ರೊಫೆಸರ್ ಡಾ. ಪ್ರಭಾತ್ ಬಳ್ನಾಡು ಮತ್ತು ಮೂಡುಬಿದಿರೆ ಜೈನ್ ಹೈಸ್ಕೂಲ್ನ ಇದರ ವಲಯ ತರಬೇತುದಾರ ಜೆಸಿ ವಿನಯಚಂದ್ರ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೀಫ್ ಪ್ರಧಾನ ಕಾರ್ಯದರ್ಶಿ ಬಿ.ಎ. ನಝೀರ್, ಕಾರ್ಯಕ್ರಮದ ಸಂಚಾಲಕ ನಿಸಾರ್ ಮುಹಮ್ಮದ್, ಶಾಂತಿ ಎಜುಕೇಶನಲ್ ಟ್ರಸ್ಟ್ನ ಟ್ರಸ್ಟಿಗಳಾದ ಯು.ಎ. ಅಬ್ದುಲ್ ಖಾದರ್, ಇಲ್ಯಾಸ್ ಇಸ್ಮಾಯೀಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ, ಹಿರಾ ಪಿಯು ಕಾಲೇಜಿನ ಪ್ರಾಂಶುಪಾಲೆ ಫಾತಿಮ ಮೆಹರೂಮ್ ಮತ್ತಿತರರು ಉಪಸ್ಥಿತರಿದ್ದರು.
ಹಿರಾ ಸ್ಕೂಲ್ ಸಂಚಾಲಕ ಕೆ. ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ಹಿರಾ ಎಜುಕೇಶನಲ್ ಇನ್ಸ್ಟಿಟ್ಯೂಟ್ನ ಸಂಚಾಲಕ ರಹ್ಮತುಲ್ಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಆಯಿಶಾ ತಸ್ಲೀಂ ಕಾರ್ಯಕ್ರಮ ನಿರೂಪಿಸಿದರು.
ಈ ಮಧ್ಯೆ ಡಿಡಿಪಿಐ ಸುಧಾಕರ್ ಅವರ ಉಪಸ್ಥಿತಿಯಲ್ಲಿ ಮೀಫ್ ಆಡಳಿತ ಸಮಿತಿಯ ಸಭೆಯು ನಡೆದು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕೆ.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮೀಫ್ ಕೋಶಾಧಿಕಾರಿ ಮತ್ತು ಹಿರಾ ಸ್ಕೂಲ್ ಇದರ ಸಂಚಾಲಕ ಕೆ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.