'ವೀರ್ ಗಾಥಾ ಪ್ರಾಜೆಕ್ಟ್': ಮಂಗಳೂರಿನ ಪ್ರಥಮ್ ಕಿಣಿ 'ಸೂಪರ್ 25'ಗೆ ಆಯ್ಕೆ
![ವೀರ್ ಗಾಥಾ ಪ್ರಾಜೆಕ್ಟ್: ಮಂಗಳೂರಿನ ಪ್ರಥಮ್ ಕಿಣಿ ಸೂಪರ್ 25ಗೆ ಆಯ್ಕೆ ವೀರ್ ಗಾಥಾ ಪ್ರಾಜೆಕ್ಟ್: ಮಂಗಳೂರಿನ ಪ್ರಥಮ್ ಕಿಣಿ ಸೂಪರ್ 25ಗೆ ಆಯ್ಕೆ](https://www.varthabharati.in/sites/default/files/images/articles/2022/01/12/321099-1641991140.jpeg)
ಮಂಗಳೂರು, ಜ.12: ರಕ್ಷಣಾ ಸಚಿವಾಲಯವು ಶಿಕ್ಷಣ ಸಚಿವಾಲಯ ಮತ್ತು MyGov ಸಹಭಾಗಿತ್ವದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಿಬಿಎಸ್ಇ 3ರಿಂದ 12ನೇ ತರಗತಿ ವರೆಗಿನ ಶಾಲಾ ಮಕ್ಕಳಿಗೆ ಆಯೋಜಿಸಿರುವ 'ವೀರ್ ಗಾಥಾ ಪ್ರಾಜೆಕ್ಟ್' 'ಸೂಪರ್ 25' ರಲ್ಲಿ ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯದ ಪ್ರಥಮ್ ಕಿಣಿ ಕೂಡಾ ಆಯ್ಕೆಯಾಗಿದ್ದಾರೆ.
ಇವರು ಅಮೃತ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ, ಮಂಗಳೂರಿನ ಸುನೀಲ್ ಕಿಣಿ ಮತ್ತು ಕೆ.ಅಕ್ಷತಾ ಕಿಣಿ ದಂಪತಿಯ ಪುತ್ರ
ಭಾರತ ಸರಕಾರವು ಆಝಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ 'ವೀರ್ ಗಾಥಾ ಪ್ರಾಜೆಕ್ಟ್' ಅನ್ನು ಪ್ರಾರಂಭಿಸಿತು, ಇದರ ಅಡಿಯಲ್ಲಿ ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಗುರುತಿಸಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದೆ. ಈ ವಿಶಿಷ್ಟ ಉಪಕ್ರಮವು ಭಾರತದ ಪರಂಪರೆ ಮತ್ತು ಸಂಸ್ಕೃತಿಗೆ ಯುವಕರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಶೌರ್ಯ ಪ್ರಶಸ್ತಿ ವಿಜೇತರ ಕುರಿತು ಕವಿತೆ/ಪ್ಯಾರಾಗ್ರಾಫ್/ಪ್ರಬಂಧ/ಚಿತ್ರಕಲೆ/ಮಲ್ಟಿಮೀಡಿಯಾ ಪ್ರೆಸೆಂಟೇಶನ್ (ಎನಾಕ್ಟ್ಮೆಂಟ್ ವಿಡಿಯೋ) ರೂಪದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗಿದೆ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 4,788 ಶಾಲೆಗಳಿಂದ ಸ್ವೀಕರಿಸಿದ 8,03,978ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ 'ಸೂಪರ್ 25' ವಿಜೇತರಲ್ಲಿ ಪ್ರಥಮ್ ಕಿಣಿ ಕೂಡಾ ಒಬ್ಬರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
25 ಯುವ ಪ್ರತಿಭೆಗಳ ಅತ್ಯುತ್ತಮ ಪ್ರಾಜೆಕ್ಟ್ ಗಳನ್ನು ಹಲವಾರು ಸುತ್ತಿನ ಮೌಲ್ಯಮಾಪನದ ನಂತರ ರಾಷ್ಟ್ರೀಯ ಮಟ್ಟದ ಜ್ಯೂರಿ ಶಾರ್ಟ್ಲಿಸ್ಟ್ ಮಾಡಿದೆ. ಇವರು ತಮ್ಮ ಪ್ರಾಜೆಕ್ಟ್ಗಳೊಂದಿಗೆ 2022ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವಾಲಯದ ವಿಶೇಷ ಅತಿಥಿಗಳಾಗಿ ತಮ್ಮ ಶಾಲೆಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವರು ಎಂದು ಪ್ರಕಟನೆ ತಿಳಿಸಿದೆ.