ಕೊರೋನ ಕಲಿಸಿದ ಸ್ವಾವಲಂಬಿ ಪಾಠ ಜೀವನದಲ್ಲಿ ಆಳವಡಿಸಿ: ಅದಮಾರು ಶ್ರೀ
ಉಡುಪಿ, ಜ.12: ಕೋವಿಡ್ ಎರಡು ವರ್ಷ ಸಾಕಷ್ಟು ಪಾಠ ಕಲಿಸಿದೆ. ನಮ್ಮ ಊರಿನ ಸಂಸ್ಕೃತಿ ಉಳಿಯಬೇಕಾದರೆ ನಾವು ನಮ್ಮಲ್ಲಿಯೇ ಉದ್ಯೋಗ ಸೃಷ್ಟಿ ಮಾಡಬೇಕಾಗಿದೆ. ಕೊರೋನ ಹೇಳಿಕೊಟ್ಟ ಸ್ವಾವಲಂಬಿ ಪಾಠ ಜೀವನದಲ್ಲಿ ಆಳವಡಿಸಬೇಕು ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಎರಡು ವರ್ಷಗಳ ಪರ್ಯಾಯ ಪೂಜಾಧಿಕಾರ ಮುಗಿಯುತ್ತಿರುವ ಹಿನ್ನೆಲೆ ಯಲ್ಲಿ ಇಂದು ಕೃಷ್ಣ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಮಠದ ಆವರಣವನ್ನು ಬದಲಾವಣೆ ಮಾಡಿದ್ದೇವೆ. ಶುಚಿತ್ವ ಹೆಚ್ಚು ಆದ್ಯತೆ ನೀಡಿ, ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಆ ನಿಟ್ಟಿನಲ್ಲಿ ಎರಡು ವರ್ಷ ಪ್ರಯತ್ನ ಮಾಡಿದ್ದೇವೆ. ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದು ನೋಡಿ ಉತ್ತಮ ವಾದದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ ಎಂದರು.
ಎರಡು ವರ್ಷಗಳ ಹಿಂದೆ ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಯಾವುದೇ ಸಂಕಲ್ಪ ಮಾಡಿರಲಿಲ್ಲ. ಕಾಲ ಕಾಲಕ್ಕೆ ಆಗಬೇಕಾದ ಕೆಲಸ ಮಾಡಿ ದ್ದೇವೆ. ಪರ್ಯಾಯ ಮುಗಿದ ಬಳಿಕ ನಮ್ಮ ಶಕ್ತಿಗೆ ಅನುಸಾರವಾಗಿ ಸಮಾಜಕ್ಕೆ ಬೇಕಾದ ಕಾರ್ಯಗಳಿಗೆ ಸ್ಪಂದನೆ ಮಾಡಲಾಗುವುದು. ನಮ್ಮ ಎರಡು ವರ್ಷ ಗಳ ಅವಧಿಯಲ್ಲಿ ಹೆಚ್ಚಿನ ಸಮಯ ಕೊರೋನಾ ಲಾಕ್ಡೌನ್ ಇದ್ದರೂ ಕೂಡ ಅದನ್ನು ನಾವು ಸರಿಯಾಗಿ ವಿನಿಯೋಗಿಸಿ ಕೆಲಸ ಕಾರ್ಯಗಳನ್ನು ವಾಡಿದ್ದೇವೆ ಎಂದು ಅವರು ತಿಳಿಸಿದರು.