ಕೊರೋನದಿಂದ ಕ್ಯಾಟರಿಂಗ್ ಉದ್ಯಮಕ್ಕೆ ಹೊಡೆತ: ರಾಜಗೋಪಾಲ್ ರೈ
![ಕೊರೋನದಿಂದ ಕ್ಯಾಟರಿಂಗ್ ಉದ್ಯಮಕ್ಕೆ ಹೊಡೆತ: ರಾಜಗೋಪಾಲ್ ರೈ ಕೊರೋನದಿಂದ ಕ್ಯಾಟರಿಂಗ್ ಉದ್ಯಮಕ್ಕೆ ಹೊಡೆತ: ರಾಜಗೋಪಾಲ್ ರೈ](https://www.varthabharati.in/sites/default/files/images/articles/2022/01/12/321163-1642002541.jpg)
ಮಂಗಳೂರು, ಜ.12: ಕೊರೋನದಿಂದ ಹೊಟೇಲ್ ಮತ್ತು ಕ್ಯಾಟರಿಂಗ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆದರೂ ಎಲ್ಲವನ್ನು ಧೈರ್ಯವಾಗಿ ಎದುರಿಸಿ ಹೊಸದಾಗಿ 60 ಕ್ಯಾಟರಿಂಗ್ ಮಾಲಕರನ್ನು ಸಂಘಟನೆಗೆ ಸೇರಿಸಿದ್ದೇವೆ. ಕೊರೋನ ಸಂಕಷ್ಟ ಕಾಲದಲ್ಲಿ ಕ್ಯಾಟರಿಂಗ್ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಾಗಿದ್ದಾಗ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದು ದ.ಕ ಕ್ಯಾಟರಿಂಗ್ ಮಾಲಕರ ಸಂಘದ ಉಪಾಧ್ಯಕ್ಷ ರಾಜಗೋಪಾಲ್ ರೈ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಂದರ್ಭ ನೂತನವಾಗಿ ಸೇರ್ಪಡೆಗೊಂಡ 26 ಮಂದಿ ಕ್ಯಾಟರಿಂಗ್ ಮಾಲಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ ಕಳೆದ ತಿಂಗಳು ಅಪಘಾತಕ್ಕೀಡಾಗಿ ಮೃತಪಟ್ಟ ಕ್ತಾಟರಿಂಗ್ ಸಂಸ್ಥೆಯೊಂದರ ಇಬ್ಬರು ಯುವಕರ ಕುಟುಂಬಕ್ಕೆ ತಲಾ 63 ಸಾವಿರ ರೂ.ನ ಚೆಕ್ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಸಂತೋಷ್ ಡಿಸೋಜ, ಗೌರವಾಧ್ಯಕ್ಷ ಸುಧಾಕರ್ ಕಾಮತ್, ಎಂ.ಎಸ್. ಇಕ್ಬಾಲ್, ವಿವಿಲ್ ಫಿಲಿಕ್ಸ್ ಲಸ್ರಾದೋ, ಅನೀಸ್, ವಿದ್ಯಾಧರ್ ನಾಗ್ವೆಕರ್, ಕಾರ್ಯದರ್ಶಿ ವಿಜಯ ಕುಮಾರ್, ಕೋಶಾಧಿಕಾರಿ ರಾಜೇಶ್, ಚಂದ್ರಶೇಖರ ಉಚ್ಚಿಲ್ ಉಪಸ್ಥಿತರಿದ್ದರು.