ಸಾವರ್ಕರ್ ಸಂಧಾನ ಪತ್ರ ಬರೆದರೆ ಹೊರತು ಕ್ಷಮಾಪಣೆ ಪತ್ರವಲ್ಲ: ಸಾತ್ಯಕಿ ಸಾವರ್ಕರ್
![ಸಾವರ್ಕರ್ ಸಂಧಾನ ಪತ್ರ ಬರೆದರೆ ಹೊರತು ಕ್ಷಮಾಪಣೆ ಪತ್ರವಲ್ಲ: ಸಾತ್ಯಕಿ ಸಾವರ್ಕರ್ ಸಾವರ್ಕರ್ ಸಂಧಾನ ಪತ್ರ ಬರೆದರೆ ಹೊರತು ಕ್ಷಮಾಪಣೆ ಪತ್ರವಲ್ಲ: ಸಾತ್ಯಕಿ ಸಾವರ್ಕರ್](https://www.varthabharati.in/sites/default/files/images/articles/2022/01/12/321167-1642003387.jpg)
ಉಡುಪಿ, ಜ.12: ತನ್ನ ಕಾರ್ಯ ಸಾಧನೆಗಾಗಿ ಜೈಲಿನಿಂದ ಬಿಡುಗಡೆ ಹೊಂದಲು ಬಯಸಿದ್ದ ಸಾವರ್ಕರ್ ಏಳು ಬಾರಿ ಬ್ರಿಟೀಷರೊಂದಿಗೆ ಸಂಧಾನ ನಡೆಸಿದ್ದರು. ಹೀಗಾಗಿ ಸಾವರ್ಕರ್ ಸಂಧಾನ ಪತ್ರ ಬರೆದರೆ ಹೊರತು ಕ್ಷಮಾಪಣೆ ಪತ್ರವಲ್ಲ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದ್ದಾರೆ.
ಕೂರ್ಮಾ ಬಳಗ ವತಿಯಿಂದ ವಿವೇಕಾನಂದ ಜಯಂತಿ ಅಂಗವಾಗಿ ಬುಧವಾರ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ಸಾವರ್ಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಂಡಮಾನ್ನಲ್ಲಿ ದಶಕಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸಾವರ್ಕರ್ ಅವರಿಗೆ ಜೀವನದ ಧ್ಯೇಯೋದ್ದೇಶ ಸ್ಪಷ್ಟವಾಗಿತ್ತು. ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ, ಹಿಂದುಗಳಲ್ಲಿರುವ ಜಾತಿ ಸಂಘರ್ಷ ದೂರಗೊಳಿಸುವುದು, ಇಸ್ಲಾಂ ಆಕ್ರಮಣ ತಡೆಯುವ 3 ಗುರಿಯನ್ನು ಹಾಕಿಕೊಂಡಿದ್ದರು ಎಂದರು.
ಸ್ವಾತಂತ್ರ ಹೋರಾಟದ ಇತಿಹಾಸದಲ್ಲೇ 2 ಜೀವಾವಧಿ ಶಿಕ್ಷೆಗೆ ಗುರಿಯಾದ ಏಕೈಕ ವ್ಯಕ್ತಿ ಸಾವರ್ಕರ್. ಅಂಡಮಾನ್ ಜೈಲಿನಲ್ಲಿ ಫಾಸಿಘರ್ ಮುಂದೆಯೇ ಇವರನ್ನು ಬಂಧನದಲ್ಲಿಟ್ಟಿದ್ದ ಬ್ರಿಟೀಷರು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದರು. ಶಾರೀರಿಕವಾಗಿ, ಮಾನಸಿಕ ಹಿಂಸೆ ನೀಡಿದ್ದರು. ಸ್ವಾತಂತ್ರದ ಬಳಿಕ ಸಾವರ್ಕರ್ ಬಗ್ಗೆ ಒಂದು ಪಕ್ಷದವರು ನಿರಂತರ ಅಪಪ್ರಚಾರದಲ್ಲಿ ನಿರತರಾಗಿ ದ್ದಾರೆ ಎಂದು ಅವರು ದೂರಿದರು.
ಲೇಖಕ ಸಂದೀಪ್ ಬಾಲಕೃಷ್ಣನ್ ಸಂವಾದ ನಡೆಸಿದರು. ಸಂವೇದನಾ ಪೌಂಡೇಶನ್ ಪ್ರವರ್ತಕ ಪ್ರಕಾಶ್ ಮಲ್ಪೆ, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.