ಇನ್ನೂ ಬಗೆಹರಿಯದ ಉಡುಪಿ ಸರಕಾರಿ ಕಾಲೇಜಿನ ಸ್ಕಾರ್ಫ್ ವಿವಾದ
ಕಾಲೇಜಿನ ಹೊರಗಡೆಯೇ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿನಿಯರು

ಉಡುಪಿ, ಜ.13: ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿನ ಸ್ಕಾರ್ಫ್ ವಿವಾದ ಇನ್ನೂ ಬಗೆಹರಿದಿಲ್ಲ, ಕಳೆದ ಎರಡು ವಾರಗಳಿಂದ ಸ್ಕಾರ್ಫ್ ಹಾಕಿದ ಕಾರಣಕ್ಕಾಗಿ ತರಗತಿ ಪ್ರವೇಶ ನಿರಾಕರಿಸಲ್ಪಟ್ಟ ಎಂಟು ಮಂದಿ ವಿದ್ಯಾರ್ಥಿನಿಯರು, ಈಗಲೂ ಕಾಲೇಜಿನ ಹೊರಗಡೆಯೇ ಕುಳಿತು ಓದು ಬರಹಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ತಲಾ ಮೂವರು ಮತ್ತು ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ವಿದ್ಯಾರ್ಥಿನಿಯರು ಕಳೆದ ಎರಡು ವಾರಗಳಿಂದ ಕಾಲೇಜಿಗೆ ಸ್ಕಾರ್ಫ್ ಧರಿಸಿಯೇ ಪ್ರತಿದಿನ ಆಗಮಿಸುತ್ತಿದ್ದಾರೆ. ಆದರೆ ಸ್ಕಾರ್ಫ್ ಧರಿಸಿದ ಕಾರಣಕ್ಕೆ ಈ ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶಿಸಲು ಪ್ರಾಂಶುಪಾಲರು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.
‘ತರಗತಿಗೆ ತೆರಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ನಾವು ಎಂಟು ಮಂದಿ ಕಾಲೇಜಿನ ಹೊರಗಡೆ ಹಾಗೂ ಮೆಟ್ಟಿಲುಗಳಲ್ಲಿ ಕುಳಿತು ತಮ್ಮ ಹಳೆ ನೋಟ್ಸ್ ಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಅದೇ ರೀತಿ ಪಾಠಗಳನ್ನು ಅಲ್ಲೇ ಓದುತ್ತಿದ್ದೇವೆ. ಆಯಾ ತರಗತಿಯಲ್ಲಿ ಆದ ಪಾಠಗಳನ್ನು ತರಗತಿಗೆ ಹಾಜರಾದ ವಿದ್ಯಾರ್ಥಿ ಗಳಿಂದ ಕೇಳಿ ಬರೆಯುತ್ತಿದ್ದೇವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಲೇಜಿನ ಹೊರಗಡೆ ಇದ್ದು ಮಧ್ಯಾಹ್ನ ವೇಳೆ ಮನೆಗೆ ವಾಪಾಸ್ಸು ಹೋಗುತ್ತಿದ್ದೇವೆ. ನಾವು ಕಳೆದ ಎರಡು ವಾರಗಳಿಂದ ಹಾಜರಾತಿಯಿಂದ ವಂಚಿತರಾಗುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಪತ್ರಿಕೆಗೆ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಅವರು, ''ವಿದ್ಯಾರ್ಥಿಗಳ ಪೋಷಕರು ಬಂದು ಕಾಲೇಜಿನ ನಿಯಮಗಳನ್ನು ಒಪ್ಪಿಕೊಂಡು ಹೋಗಿದ್ದಾರೆ. ಹಾಗಾಗಿ ಸ್ಕಾರ್ಫ್ ಸಮಸ್ಯೆ ಬಗೆಹರಿದಿದೆ. ಮಕ್ಕಳು ಮೊದಲಿನಂತೆ ಕಾಲೇಜಿಗೆ ಬರುತ್ತಿದ್ದಾರೆ'' ಎಂದು ಹೇಳಿದ್ದಾರೆ.