ಲಾಕ್ಡೌನ್, ನೈಟ್ ಕರ್ಫ್ಯೂ ವರ್ತಕರಿಗೆ ಮಾರಕ: ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ
ಉಡುಪಿ, ಜ.13: ಕಳೆದ ಎರಡು ವರ್ಷಗಳಿಂದ ಕಾಡಿದ ಕೋವಿಡ್ ನಿಂದ ಎಲ್ಲ ವರ್ತಕರು ಹಾಗೂ ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ನಷ್ಟ ಅನುಭವಿಸಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಮೂರನೇ ಬಾರಿಗೆ ಲಾಕ್ ಡೌನ್, ನೈಟ್ ಕರ್ಫ್ಯೂಗಳು ವರ್ತಕರಿಗೆ ಹಾಗೂ ಉದ್ಯಮಿಗಳಿಗೆ ತೀರಾ ಮಾರಕವಾಗಲಿದೆ ಎಂದು ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ್ ಸನಿಲ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಾವಿಗಿಂತ ಆರ್ಥಿಕ ಸಂಕಷ್ಟದಿಂದ ಆತ್ಮ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಂಭವಿಸುವ ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೊರೋನ ತಡೆಯಲು ಲಾಕ್ ಡೌನ್ ಮಾತ್ರವೇ ಪರಿಹಾರ ಮಾರ್ಗವಲ್ಲ. ಆದುದರಿಂದ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಕೊರೋನಾ ನಿಯಂತ್ರಿಸುವ ಕಾರ್ಯವನ್ನು ಸರಕಾರ ಮಾಡಬೇಕೆ ಹೊರತು ಲಾಕ್ ಡೌನ್ ವಿಧಿಸಬಾರದು ಎಂದು ಒತ್ತಾಯಿಸಿದರು.
ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಚಪ್ಪಲಿ, ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆದರೆ ಅದೇ ವಸ್ತುಗಳನ್ನು ಮಾಲ್ಗಳಲ್ಲಿನ ಸೂಪರ್ ಮಾರ್ಕೆಟ್ನಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಜನರು ಯಾವುದೇ ನಿಯಮ ಪಾಲಿಸದೆ ರಾಜಾರೋಷವಾಗಿ ಎಲ್ಲ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ಕೂಡ ನಿರಂತರವಾಗಿ ನಡೆಯುತ್ತಿವೆ. ಈ ವ್ಯವಸ್ಥೆ ರೋಗ ಹರಡಲು ಸುಲಭ ದಾರಿಯಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಆನಂದ ಕಾರ್ನಡ್, ಕಾರ್ಯದರ್ಶಿ ಮಾಕ್ಸಿಮ್ ಸಲ್ದಾನ, ಸಹ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಡೊನಾಲ್ಡ್ ಸಲ್ದಾನ, ಸಲಹಾ ಸಮಿತಿಯ ಡೋಲ್ಫಿ ವಿಕ್ಟರ್ ಲೂಯಿಸ್ ಉಪಸ್ಥಿತರಿದ್ದರು