ಜ.17: ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಅನುಸ್ಮರಣೆ ಕಾರ್ಯಕ್ರಮ
ಮಂಗಳೂರು, ಜ.14: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಮಾಜಿ ಅಧ್ಯಕ್ಷ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸ್ಥಾಪಕ ಮರ್ಹೂಂ ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಅವರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ತತ್ವ ಆದರ್ಶಗಳನ್ನು ಕರ್ನಾಟಕ ಜನತೆಗೆ ಪರಿಚಯಿಸುವ ಸಲುವಾಗಿ ಸ್ಥಾಪಿಸಲ್ಪಟ್ಟಿರುವ ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳ್ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ಜ.17ರಂದು ಬೆಳಗ್ಗೆ 10:30ಕ್ಕೆ ನಗರದ ಕಂಕನಾಡಿಯ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಬಾಫಕಿ ತಂಙಳ್ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಪರ್ಲಡ್ಕ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಬಾಫಕಿ ತಂಙಳ್ರ ಅನುಯಾಯಿಯೂ, ಉದ್ಯಮಿಯೂ ಆಗಿದ್ದ ಪಿ.ಎ. ಇಬ್ರಾಹೀಂ ಹಾಜಿ ಅವರ ಅನುಸ್ಮರಣೆಯೂ ನಡೆಯಲಿದೆ. ಕಾರ್ಯಕ್ರಮದಲ್ಲಿ ವಾಗ್ಮಿ ಅಬ್ದುಸ್ಸಮದ್ ಪೂಕೋಟೂರು ಅನುಸ್ಮರಣಾ ಪ್ರಭಾಷಣ ಮಾಡಲಿದ್ದಾರೆ. ಅಲ್ಲದೆ ಕೇರಳ-ಕರ್ನಾಟಕ ರಾಜ್ಯಗಳ ರಾಜಕೀಯ ಪಕ್ಷಗಳ ಮುಖಂಡರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಎಎಸ್ಇ ಇಬ್ರಾಹೀಂ ಕರೀಂ, ನೌಶಾದ್ ಮಲಾರ್, ಇಸ್ಮಾಯೀಲ್ ಉಪಸ್ಥಿತರಿದ್ದರು.