ಗುಜರಾತ್: ಹಳಿ ಮೇಲೆ ಹಾಕಲಾಗಿದ್ದ ಸಿಮೆಂಟ್ ಪಿಲ್ಲರ್ಗೆ ಡಿಕ್ಕಿ ಹೊಡೆದ ರಾಜಧಾನಿ ಎಕ್ಸ್ಪ್ರೆಸ್ ರೈಲು
ದುಷ್ಕರ್ಮಿಗಳಿಂದ ರೈಲು ಹಳಿ ತಪ್ಪಿಸುವ ಪ್ರಯತ್ನ: ಪೊಲೀಸರ ಶಂಕೆ

ವಲ್ಸಾದ್: ಮುಂಬೈ-ದಿಲ್ಲಿ ರಾಜಧಾನಿ ಎಕ್ಸ್ಪ್ರೆಸ್ ರೈಲು ದಕ್ಷಿಣ ಗುಜರಾತ್ನ ವಲ್ಸಾದ್ ಬಳಿಯ ರೈಲ್ವೆ ಹಳಿ ಮೇಲೆ ಕೆಲವು ದುಷ್ಕರ್ಮಿಗಳು ಇರಿಸಿದ್ದ ಸಿಮೆಂಟ್ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ. ಆದರೆ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 7.10ರ ಸುಮಾರಿಗೆ ಈ ಘಟನೆ ನಡೆದಿದ್ದು, ದಿಲ್ಲಿಗೆ ತೆರಳುತ್ತಿದ್ದ ರೈಲನ್ನು ಹಳಿತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
"ಮುಂಬೈ-ಹಝರತ್ ನಿಝಾಮುದ್ದೀನ್ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ಪ್ರೆಸ್ ರೈಲು ವಲ್ಸಾದ್ ಬಳಿಯ ಅತುಲ್ ನಿಲ್ದಾಣದ ಸಮೀಪವಿರುವ ರೈಲ್ವೆ ಹಳಿಯಲ್ಲಿ ಹಾಕಲಾಗಿದ್ದ ಸಿಮೆಂಟ್ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ. ರೈಲಿಗೆ ಡಿಕ್ಕಿ ಹೊಡೆದ ನಂತರ ಪಿಲ್ಲರ್ ಹಳಿಯಿಂದ ಹೊರಕ್ಕೆ ತಳ್ಳಲ್ಪಟ್ಟಿತು. ಘಟನೆಯು ರೈಲಿನ ಮೇಲೆ ಪರಿಣಾಮ ಬೀರಲಿಲ್ಲ. ರೈಲು ಮುಂದೆ ಸಾಗಿತು ಮತ್ತು ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಲೊಕೊ ಪೈಲಟ್ ತಕ್ಷಣ ಅತುಲ್ ರೈಲ್ವೆ ನಿಲ್ದಾಣದ ಸಿಬ್ಬಂದಿಗೆ ಅದರ ಬಗ್ಗೆ ಮಾಹಿತಿ ನೀಡಿದರು" ಎಂದು ವಲ್ಸಾದ್ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
"ಕೆಲವು ದುಷ್ಕರ್ಮಿಗಳು ಸಿಮೆಂಟ್ ಪಿಲ್ಲರ್ ಅನ್ನು ಹಳಿ ಮೇಲೆ ಇರಿಸಿದ್ದಾರೆ. ರೈಲು ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ. ನಂತರ ರೈಲು ವ್ಯವಸ್ಥಾಪಕರು ತಕ್ಷಣ ಸ್ಥಳೀಯ ಸ್ಟೇಷನ್ ಮಾಸ್ಟರ್ಗೆ ಮಾಹಿತಿ ನೀಡಿದ್ದಾರೆ" ಎಂದು ಸೂರತ್ನ ಐಜಿ ರೇಂಜ್ ರಾಜ್ಕುಮಾರ್ ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದರು.







