ಹಿಜಾಬ್ ವಿವಾದ: ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಗ್ರಹ
ಉಡುಪಿ, ಜ. 22: ಹಿಜಾಬ್ ಧರಿಸುವ ಬಗೆಗಿನ ವಿವಾದ ಕಂಡಾಗ ನಮ್ಮ ದೇಶ ಎತ್ತ ಸಾಗುತ್ತಿದೆ. ನಮ್ಮ ಜನರ ಮನೋಸ್ಥಿತಿ ಯಾಕೆ ಹೀಗಾಗುತ್ತಿದೆ ಎಂಬ ಚಿಂತೆ ಮೂಡುತ್ತಿದೆ. ಯಾರಿಗೂ ಏನೂ ಸಮಸ್ಯೆ ಇಲ್ಲದ ಈ ವಿಚಾರಕ್ಕೆ ಯಾಕೆ ಇಷ್ಟು ಮಹತ್ವ ಸಿಗುತ್ತಿದೆ. ಅದೆಷ್ಟೋ ವರ್ಷಗಳಿಂದ ಬಂದ ಪದ್ಧತಿಗೆ ಈಗ ಯಾಕೆ ಇಲ್ಲ ಸಲ್ಲದ ಮಹತ್ವ? ಎಂದು ಕೆಪಿಸಿಸಿ ಪ್ಯಾನಲಿಷ್ಟ್ ವೆರೋನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.
ಇಂದು ನಮ್ಮ ಮುಂದೆ ಇತರ ಹಲವಾರು ಸಮಸ್ಯೆಗಳು ಇರುವಾಗ ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ತಿಂಗಳುಗಟ್ಟಲೆ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸವನ್ನು ಸೂಕ್ತ ರೀತಿಯಲ್ಲಿ ಪಡೆಯುವ ಬದಲು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ಎಲ್ಲರೂ ಒಳ್ಳೆಯ ಮನಸ್ಸಿನಿಂದ ಕೂತು ಎಚ್ಚರಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ಈ ಮೂಲಕ ಕಾಲೇಜಿನಲ್ಲಿ ಕಲಿಯುತ್ತಿರುವ ಇತರ ವಿದ್ಯಾರ್ಥಿಗಳು ಸಹ ಶಾಂತಿಯುತ ಹಾಗೂ ಯಾವುದೇ ಕಿರಿಕಿರಿ ಇಲ್ಲದೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.