ಜ.24ರಂದು ನಂಚಾರಿನಲ್ಲಿ ಸುಸಜ್ಜಿತ ಗೋ ಆಶ್ರಯ ತಾಣ ಲೋಕಾರ್ಪಣೆ
ಉಡುಪಿ, ಜ.22: ಗೋಪಾಲಕರಿಂದ, ಗೋಪಾಲಕರಿಗಾಗಿ, ಗೋಪಾಲಕರೇ ನಡೆಸುವ ಸುಸಜ್ಜಿತ ಗೋ ಆಶ್ರಯ ತಾಣವೊಂದು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ವತಿಯಿಂದ ಬ್ರಹ್ಮಾವರ ತಾಲೂಕು ನಂಚಾರಿನಲ್ಲಿ ಇದೇ ಜ.24ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಎನ್.ರಾಜೇಂದ್ರ ಚಕ್ಕೇರ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ಮೊದಲ ಹಂತದಲ್ಲಿ ಸುಮಾರು ಆರು ಎಕರೆ ಜಾಗದಲ್ಲಿ ಅನಾಥ, ಅಪಘಾತಕ್ಕೀಡಾದ 200ರಿಂದ 250 ಗೋವುಗಳಿಗೆ ಆಶ್ರಯತಾಣ ಕಲ್ಪಿಸಲಿದ್ದೇವೆ. ಇದರೊಂದಿಗೆ ಸುಸಜ್ಜಿತ ಚಿಕಿತ್ಸಾಲಯ ನಿರ್ಮಾಣಗೊಳ್ಳಲಿದೆ ಎಂದರು.
ಕಳೆದ ಡಿ.17ರಂದು ಶೃಂಗೇರಿ ಮಹಾಸಂಸ್ಥಾನದ ಆಡಳಿತಾಧಿಕಾರಿಗಳಾದ ಗೌರಿಶಂಕರ್ ಇವರಿಂದ ಶಂಕುಸ್ಥಾಪನೆ ನೆರವೇರಿದ್ದು, ಇದೀಗ ಗೋ ಶಾಲೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಜ.24ರಂದು ಇದರ ಉದ್ಘಾಟನೆ ನಡೆಯಲಿದೆ ಎಂದರು.
ಇದೇ ಜ.24ರ ಸೋಮವಾರ ಬೆಳಗ್ಗೆ 9:30ಕ್ಕೆ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಗೋಶಾಲೆಯ ಪ್ರಥಮ ಚರಣದ ಲೋಕಾರ್ಪಣೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿ ಶಂಕರ್, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಂಚಾರಿನಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ 1150 ಗೋವುಗಳಿಗೆ ಸುಸಜ್ಜಿತ ಆಶ್ರಯ ತಾಣವನ್ನು ನಿರ್ಮಿಸುವುದು ಟ್ರಸ್ಟ್ನ ಗುರಿಯಾಗಿದೆ. ಇಲ್ಲಿ ಸುಸಜ್ಜಿತ ಗೋ ಆಸ್ಪತ್ರೆ, ಮೂರು ಅಂತಸ್ತಿನ ಎರಡು ಗೋ ಆಶ್ರಯ ತಾಣ, ಪಶು ಆಹಾರ ತಯಾರಿಕಾ ಘಟಕ, ಕಾರ್ಮಿಕ ವಸತಿ ಸಮುಚ್ಛಯ ಹಾಗೂ ಸಾವಯವ ಗೊಬ್ಬರ ತಯಾರಿಕಾ ಘಟಕವನ್ನು ನಿರ್ಮಿಸಲಾಗುವುದು ಎಂದು ರಾಜೇಂದ್ರ ಚಕ್ಕೇರ ತಿಳಿಸಿದರು.
ಅನಾಥ, ಅಸಹಾಯಕ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ರಕ್ಷಿಸಿ ಸಲಹುವುದೇ ನಮ್ಮ ಪ್ರಥಮ ಆದ್ಯತೆ. ಗೋವುಗಳು ನೀಡುವ ಗೋಮಯ ಹಾಗೂ ಗೋಮೂತ್ರಗಳಿಂದ ಬೇಸಾಯಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ತಯಾರಿಸಲಾಗುವುದು ಎಂದರು.
ಟ್ರಸ್ಟ್ನ ಖಜಾಂಚಿ ರಾಮಕೃಷ್ಣ ಆಚಾರ್ಯ ಕೋಟ, ಟ್ರಸ್ಟಿ ಶ್ರೀಕಾಂತ ಶೆಟ್ಟಿ ವಂಡಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.