ಪೆರಂಪಳ್ಳಿಯ -ಪರಾರಿ ‘ಬಂಗಾರದ ರಸ್ತೆಗೆ ಸ್ವಾಗತ’
ಧೂಳುಮಯ ರಸ್ತೆ- ಶಾಸಕ ರಘುಪತಿ ಭಟ್ ವಿರುದ್ಧ ಬ್ಯಾನರ್ ಆಳವಡಿಸಿ ಆಕ್ರೋಶ
![ಪೆರಂಪಳ್ಳಿಯ -ಪರಾರಿ ‘ಬಂಗಾರದ ರಸ್ತೆಗೆ ಸ್ವಾಗತ’ ಪೆರಂಪಳ್ಳಿಯ -ಪರಾರಿ ‘ಬಂಗಾರದ ರಸ್ತೆಗೆ ಸ್ವಾಗತ’](https://www.varthabharati.in/sites/default/files/images/articles/2022/01/22/322342-1642866095.jpg)
ಉಡುಪಿ, ಜ.22: ಮಣಿಪಾಲದಿಂದ ಶೀಂಬ್ರಾ ಕೊಳಲಗಿರಿ ಸಂಪರ್ಕಿಸುವ ಪರಾರಿ ಸೇತುವೆವರೆಗಿನ ರಸ್ತೆಯು ಸಂಪೂರ್ಣ ಧೂಳುಮಯವಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಶಾಸಕ ರಘುಪತಿ ಭಟ್ ಅವರ ಫೋಟೋದೊಂದಿಗೆ ಹಾಕಿರುವ ಬ್ಯಾನರ್ ಎಲ್ಲರ ಗಮನ ಸೆಳೆಯುತ್ತಿದೆ.
‘ಬಂಗಾರದ ರಸ್ತೆಗೆ ಸ್ವಾಗತ: ಧೂಳು ಉಚಿತ, ಎದ್ದು ಬೀಳುವುದು ಖಚಿತ, ಇನ್ನು ಈ ರಸ್ತೆಗೆ ಮುಕ್ತಿ ನೀಡದೇ ಹೋದರೆ ನಮ್ಮ ಮತ ನೋಟಾ ಖಚಿತ’ ಎಂದು ಬ್ಯಾನರ್ನಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ. ಈ ಮೂಲಕ ರಸ್ತೆ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಾರಿ ಸೇತುವೆ, ಶೀಂಬ್ರಾ, ಪೆರಂಪಳ್ಳಿ, ಸಗ್ರಿ ಇಂದ್ರಾಳಿ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸುಮಾರು ಏಳು ಕೋಟಿ ರೂ. ವೆಚ್ಚದಲ್ಲಿ ಇದರ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಇಂದ್ರಾಳಿ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಪೂರ್ಣ ಗೊಂಡಿದ್ದು, ಪೆರಪಂಳ್ಳಿ ಪರಾರಿ ಸೇತುವೆವರೆಗಿನ ರಸ್ತೆ ಕಾಮಗಾರಿಯು ಕುಂಟುತ್ತ ಸಾಗುತ್ತಿದೆ.
ಈ ರಸ್ತೆಯ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದು, ವಿವಿಧ ಕಾರಣಗಳಿಗಾಗಿ ಕಾಮಗಾರಿ ಪೂರ್ಣಗೊಳ್ಳದೆ ಮತ್ತಷ್ಟು ವಿಳಂಬವಾಗುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಈ ರಸ್ತೆಯಿಂದಾಗಿ ಸ್ಥಳೀಯರು ಮಳೆಗಾಲದಲ್ಲಿ ಕೆಸರು ನೀರಿನಿಂದ ಹಾಗೂ ಬೇಸಿಗೆಯಲ್ಲಿ ಧೂಳಿನಿಂದ ಕಂಗೆಟ್ಟು ಹೋಗಿದ್ದಾರೆ. ಜಲ್ಲಿ ಹುಡಿ ಮತ್ತು ಕೆಂಪುಮಣ್ಣಿನ ಧೂಳಿನ ಸಮಸ್ಯೆಗೆ ಮುಕ್ತಿಯೇ ಇಲ್ಲ ದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿದಿನ ಈ ರಸ್ತೆಯಲ್ಲಿ ಸಾವಿರಾರು ಜನರು ತಿರುಗುತ್ತಾರೆ. ಕಾಮಗಾರಿ ಅಪೂರ್ಣವಾಗಿರುವುದರಿಂದ ಹಲವು ಮಂದಿ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮಹಿಳೆಯರಿಗಂತೂ ಈ ರಸ್ತೆಯಲ್ಲಿ ತಿರುಗಲು ಸಾಧ್ಯವೇ ಇಲ್ಲದಂತಾಗಿದೆ. ಇನ್ನೊಂದು ಚುನಾವಣೆ ಬರುವವರೆಗೆ ಕಾಯದೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯತ್ತ ಗಮನಹರಿಸಿ ಪರಿಹರಿಸ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ವಾರಾಹಿಯಿಂದ ನೀರು ಪೂರೈಕೆ ಮಾಡುವ ಪ್ರಮುಖ ಯೋಜನೆಗೆ ಸಂಬಂಧಿಸಿ ಶಿಂಬ್ರಾ, ಪೆರಂಪಳ್ಳಿ, ಮಣಿಪಾಲ, ಎಂಜೆಸಿವರೆಗಿನ ಪ್ರಮುಖ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಪೈಪ್ ಸಂಪರ್ಕಿಸುವ ಕಾರ್ಯದಲ್ಲಿನ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಕಳೆದ ಬಾರಿ ಮಳೆಯಿಂದಾಗಿ ಈ ಕಾಮಗಾರಿ ವಿಳಂಬವಾಗಿತ್ತು. ಈ ಬಗ್ಗೆ ಸಭೆ ನಡೆಸಿದ್ದು, 10-15 ದಿನಗಳಲ್ಲಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅದರ ನಂತರ ಎರಡು ತಿಂಗಳ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು’
-ರಘುಪತಿ ಭಟ್, ಶಾಸಕರು, ಉಡುಪಿ
![](https://www.varthabharati.in/sites/default/files/images/galllery/2022/01/22/UD-J22 ROAD1.jpg)