ಸುಳ್ಳಾದ ಗೃಹಸಚಿವರ ಭರವಸೆ; ಕೊರಗರ ಸಭೆಯಲ್ಲಿ ಆಕ್ರೋಶ: ಮತ್ತೆ 15 ದಿನಗಳ ಗಡುವು
ಕೊರಗರ ಮೇಲಿನ ಕೇಸ್ ವಾಪಸ್ ವಿಚಾರ

ಕೋಟ, ಜ.23: ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗ ಕಾಲನಿಯಲ್ಲಿ ಕೊರಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವರ ಸೇರಿದಂತೆ ಏಳು ಮಂದಿ ವಿರುದ್ಧ ದಾಖಲಾಗಿರುವ ಕೇಸುಗಳನ್ನು 15 ದಿನಗಳೊಳಗೆ ವಾಪಸ್ ಪಡೆಯದಿದ್ದರೆ ಪಾದಯಾತ್ರೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಕೊರಗ ಸಂಘಟನೆಗಳು ನಿರ್ಧರಿಸಿವೆ.
ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ನೇತೃತ್ವದಲ್ಲಿ ಕೋಟದಲ್ಲಿ ರವಿವಾರ ನಡೆದ ಕೊರಗ ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಘಟನೆಯ ಬಳಿಕ ಕಾಲನಿಗೆ ಭೇಟಿ ನೀಡಿದ ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಕೊರಗರ ಮೇಲಿನ ಕೇಸು ವಾಪಸು ಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ. ಆ ಬಗ್ಗೆ ಯಾವುದೇ ಪ್ರಕ್ರಿಯೆಗಳು ಕೂಡ ನಡೆದಿಲ್ಲ. ಈ ನಿಟ್ಟಿನಲ್ಲಿ ಕೇಸ್ ವಾಪಸ್ ಪಡೆಯಲು ಮತ್ತೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಈ ಅವಧಿಯೊಳಗೆ ಕೇಸ್ ವಾಪಸು ಪಡೆಯದಿದ್ದರೆ ಕೋಟದಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಸಭೆಯಲ್ಲಿ ಮುಖಂಡರು ಎಚ್ಚರಿಕೆ ನೀಡಿದರು.
ಸುಳ್ಳಾದ ಸಚಿವರ ಭರವಸೆ: ಡಿ.27ರಂದು ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಕೋಟ ಪೊಲೀಸರು ಕೊರಗರ ಮೇಲೆ ಲಾಠಿ ಚಾರ್ಜ್ ನಡೆಸಿ, ದೌರ್ಜನ್ಯ ಎಸಗಿದ್ದರಲ್ಲದೆ ಅಮಾಯಕರ ಕೊರಗರ ಮೇಲೆಯೇ ಸುಳ್ಳು ಕೇಸುಗಳನ್ನು ದಾಖಲಿಸಿದ್ದರು.
ಈ ಬಗ್ಗೆ ಜ.1ರಂದು ಕಾಲನಿಗೆ ಭೇಟಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪೊಲೀಸರು ದಾಖಲಿಸಿರುವ ಪ್ರಕರಣ ಸುಳ್ಳು ಎಂಬುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಅದನ್ನು ಹಿಂಪಡೆಯುವುದಾಗಿ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಎಲ್ಲ ಬೆಳವಣಿಗೆಯಿಂದ ಗೃಹ ಸಚಿವರ ಮಾತಿನ ಮೇಲೆ ನಂಬಿಕೆ ಇಟ್ಟು ಉದ್ದೇಶಿಸಿದ್ದ ಪ್ರತಿಭಟನೆಯನ್ನು 10 ದಿನಗಳ ಕಾಲ ಮುಂದೂಡಲಾಗಿತ್ತು ಎಂದು ಕೊರಗ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಕುರಿತು 10 ದಿನಗಳಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ. ಬಳಿಕ ಸಮಾಜ ಕಲ್ಯಾಣ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿದೆವು. ಅವರು ಮತ್ತೆ 15 ದಿನಗಳ ಕಾಲ ಅವಕಾಶವನ್ನು ಕೇಳಿದರು. ಆದರೆ ಇಂದಿಗೆ ಈ ಘಟನೆ ನಡೆದು ಒಂದು ತಿಂಗಳಾಗುತ್ತ ಬಂದರೂ, ಯಾವುದೇ ಆಶಾದಾಯಕ ಬೆಳವಣಿಗೆ ಕಾಣುತ್ತಿಲ್ಲ ಎಂದು ಕೊರಗ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ದೊರೆಯದಿದ್ದಲ್ಲಿ ಕೊರಗ ಸಮುದಾಯದವರು ನಂಬಿದ ಕುಲ ದೈವ ಕೊರಗಜ್ಜನ ತಾಯಿ ಬೈಕಾಡ್ತಿ ಅಪ್ಪೆಗೆ ನಮ್ಮ ತಾಯಂದಿರು ಹಾಗೂ ಅಜ್ಜಿಯಂದಿರು ಸೇರಿ ಭೂಮಿಗೆ ಕಣ್ಣೀರು ಇಳಿಸಿ ದೂರು ನೀಡಲಾಗುವುದು ಎಂದು ಕೊರಗ ಮುಖಂಡ ಬಾಲರಾಜ್ ಮಂಗಳೂರು ತಿಳಿಸಿದರು.
ಸಭೆಯಲ್ಲಿ ಕೊರಗ ಸಂಘಟನೆಗಳ ಮುಖಂಡರಾದ ವಿ.ಗಣೇಶ್ ಕುಂದಾಪುರ, ಸಂಜೀವ ಕೊಡಿಕಲ್, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಪುತ್ರನ್, ಕೋಟತಟ್ಟು ಗ್ರಾಪಂ ಸದಸ್ಯೆ ಸೀತಾ, ಪ್ರಮುಖರಾದ ರಾಜೇಶ್ ಕೋಟ, ಸುದರ್ಶನ್ ಕೋಟ, ಲಕ್ಷ್ಮಣ್ ಬೈಂದೂರು, ನಾಗರಾಜ್ ಮಂಗಳೂರು, ಗಣೇಶ್ ಬಾರ್ಕೂರು ಶಿಲ್ಪಾಮತ್ತಿತರರು ಉಪಸ್ಥಿತರಿದ್ದರು.
ಪೊಲೀಸರನ್ನು ಕಂಡರೆ ಭಯ
ಸಚಿವರ ಭರವಸೆಗಳು ಕೇವಲ ಮಾತಾಗಿಯೇ ಉಳಿದಿದೆಯೇ ಹೊರತು ನಮ್ಮ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಸುಳ್ಳು ಪ್ರಕರಣ ದಾಖಲಿಸಿರುವುದಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಇಂದಿಗೂ ನಮ್ಮ ಜನ ಪೊಲೀಸರನ್ನು ಕಂಡು ಹೆದರುತ್ತಿದ್ದಾರೆ. ಆ ಒಂದು ಪ್ರಕರಣದಲ್ಲಿ ನಡೆದ ದೌರ್ಜನ್ಯದ ಆಘಾತದಿಂದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಮುಖಂಡರು ಸಭೆಯಲ್ಲಿ ತಿಳಿಸಿದರು.
''ಸಚಿವರು ನೀಡಿದ ಭರವಸೆಯಂತೆ ಕೇಸ್ ವಾಪಸ್ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆಯೇ ಇಲ್ಲವೇ ಎಂಬುದು ನಮಗೆ ಒಂದು ಗೊತ್ತಾಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ರ್ಯಾಲಿ ನಡೆಸಲು ಅವಕಾಶ ಇಲ್ಲದ ಕಾರಣ ನಮ್ಮ ಜ.24ರ ಪ್ರತಿಭಟನೆಯನ್ನು ಕೈಬಿಟ್ಟು, ಮತ್ತೆ 15 ದಿನಗಳು ಕಾಯುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. 15 ದಿನಗಳ ನಂತರವೂ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ನಡೆಸಲಾಗುವುದು''.
- ಗಣೇಶ್ ಕೊರಗ, ಕೊರಗ ಮುಖಂಡರು
‘ಸಚಿವರು ನಮ್ಮಲ್ಲಿ ಸುಳ್ಳು ಹೇಳಿದ್ದಾರೆಯೇ?’
ಈ ಸರಕಾರದಲ್ಲಿ ಗೃಹ ಸಚಿವರ ಮಾತಿಗೆ ಬೆಲೆ ಇಲ್ಲವೇ ಅಥವಾ ಗೃಹ ಸಚಿವರು ನಮ್ಮ ಎದುರು ನಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು 10 ದಿನಗಳೊಳಗೆ ಹಿಂದೆಪಡೆಯುತ್ತೇವೆ ಎಂದು ಸುಳ್ಳು ಹೇಳಿದ್ದಾರೆಯೇ? ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರ ಮಾತು ಕೇಳಿ ನಾವು ಹೋರಾಟ ಮಾಡದೆ ಇರುವುದು ತಪ್ಪೇ ಎಂದು ಸಭೆಯಲ್ಲಿ ಕೊರಗ ಮುಖಂಡರು ಪ್ರಶ್ನಿಸಿದ್ದಾರೆ.
ಅದೇ ರೀತಿ ಸಚಿವರು ಇದೇ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೊರಗರ ಕಾಲನಿಗೆ ಮೂಲಭೂತ ಸೌಕರ್ಯವನ್ನು ಕೂಡಲೇ ಒದಗಿಸಬೇಕು ಮತ್ತು ಕೊರಗರ ಭೂಮಿಯ ಹಕ್ಕುಪತ್ರವನ್ನು ತಕ್ಷಣವೇ ಸರಿ ಮಾಡಿಕೊಡಬೇಕು ಎಂದು ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.