ಕುತ್ಪಾಡಿ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ
![ಕುತ್ಪಾಡಿ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಕುತ್ಪಾಡಿ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ](https://www.varthabharati.in/sites/default/files/images/articles/2022/01/23/322428-1642951369.jpg)
ಉಡುಪಿ, ಜ.23: ಕುತ್ಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ‘ಜಾಗೃತಿ’ ಇತ್ತೀಚೆಗೆ ಸಮಾಪನಗೊಂಡಿತು.
ಶಾಲಾ ಪರಿಸರದ ಸ್ವಚ್ಛತಾ ಕಾರ್ಯವನ್ನು ಶಿಬಿರಾರ್ಥಿಗಳು ಅಚ್ಚುಕಟ್ಟಾಗಿ ನಿಭಾಯಿಸಿದರು. ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯದ ನಿರ್ವಹಣೆ ಮಾಡಬೇಕೆಂದು ಸಮೀಪದ ಶ್ರೀರಾಮದೂತ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಸನ್ನ ಅಮೀನ್ ಅವರಲ್ಲಿ ಮನವಿ ಮಾಡಲಾಯಿತು.
ಉಚಿತ ಸಾರ್ವಜನಿಕ ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಅಂಗನವಾಡಿ ವಿದ್ಯಾರ್ಥಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಯುರ್ವೇದದ ಕುರಿತು ಜಾಗೃತಿ ಕಾರ್ಯಕ್ರಮಗಳು ವಿಶೇಷ ಮುತುವರ್ಜಿಯಿಂದ ನಡೆದವು. ಶಾಲಾ ವಿದ್ಯಾರ್ಥಿಗಳಿಗೆ ಸಸ್ಯ ಜಾಗೃತಿ ಕಾರ್ಯ ಕ್ರಮವನ್ನು ರೂಪಿಸಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ.ವೀರ ಕುಮಾರ ಕೆ. ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ್ದ ಕುತ್ಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯಿನಿ ರೇಣುಕಾ ಶಿಬಿರಾರ್ಥಿಗಳು ಇನ್ನಷ್ಟು ಸಮಾಜಮುಖಿ ಕಾರ್ಯ ಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ವಿದ್ಯಾಲಕ್ಷ್ಮಿ ಕೆ., ಡಾ.ಯೋಗೀಶ ಆಚಾರ್ಯ, ಡಾ.ಶ್ರೀನಿಧಿ ಧನ್ಯ ಬಿ.ಎಸ್. ಉಪಸ್ಥಿತರಿದ್ದರು.