ಶಿವಪುರದಲ್ಲಿ ಸರಕಾರಿ ಗೋಶಾಲೆ: ಪೇಜಾವರ ಶ್ರೀ ಸ್ಥಳ ಪರಿಶೀಲನೆ

ಉಡುಪಿ, ಜ.23: ಜಿಲ್ಲಾವಾರು ಗೋಶಾಲೆ ನಿರ್ಮಿಸುವ ರಾಜ್ಯ ಸರಕಾರದ ಮಹತ್ವದ ನಿರ್ಣಯದಂತೆ ಉಡುಪಿ ಜಿಲ್ಲೆಯ ಹೆಬ್ರಿ ಶಿವಪುರ ಸಮೀಪ ಕೆರೆ ಬೆಟ್ಟುವಿನ ಸುಮಾರು 13 ಎಕರೆ ಭೂಮಿಯಲ್ಲಿ ಗೋಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಗೋಶಾಲೆಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ಪೇಜಾವರ ಶ್ರೀವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದ ಶ್ರೀವಿಶ್ವೇಶಕೃಷ್ಣ ಗೋ ಸೇವಾ ಟ್ರಸ್ಟ್ ವಹಿಸಿಕೊಳ್ಳುವಂತೆ ಸರಕಾರ ನಿವೇದಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಪೇಜಾವರ ಸ್ವಾಮೀಜಿ ಹಾಗೂ ಟ್ರಸ್ಟ್ ವಿಶ್ವಸ್ಥರಾದ ಪದ್ಮನಾಭ ಆಚಾರ್ಯ, ಗುರುದಾಸ್ ಶೆಣೈ, ಹೆಬ್ರಿ ತಹಶೀಲ್ದಾರ್ ಪುರಂದರ, ಹೆಬ್ರಿ ತಾಲೂಕು ಪಶು ವೈದ್ಯಾಧಿಕಾರಿ ಡಾ.ಪರಶುರಾಮ ಕೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲ ಹಂತದಲ್ಲಿ ಸರಕಾರದ ಅನುದಾನವನ್ನು ಬಳಸಿ ಇಡೀ ನಿವೇಶನಕ್ಕೆ ತಡೆ ಬೇಲಿ ಹಾಕುವುದು ಹಾಗೂ ಸ್ಥಳದಲ್ಲಿರುವ ಕೆರೆ ಪುನರುತ್ಥಾನ ಕಾರ್ಯ ಗಳನ್ನು ಪ್ರಧಾನ ಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಸಹಯೋಗ ದೊಂದಿಗೆ ನಡೆಸಲಾಗುವುದು. ಮುಂದಿನ ಹಂತದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ತಹಶೀಲ್ದಾರ್ ಹಾಗೂ ಪಶುವೈದ್ಯಾಧಿಕಾರಿಗಳು ವಿವರಿಸಿದರು.
ಈ ಗೋಶಾಲೆಯಲ್ಲಿ ಸಂರಕ್ಷಸಬಹುದಾದ ಗೋವುಗಳೆಷ್ಟು ಎನ್ನುವುದನ್ನು ಮೊದಲು ನಿರ್ಧರಿಸಬೇಕು. ಬಳಿಕ ಪಶು ಆಹಾರ ದಾಸ್ತಾನು, ಗೋಮಯ ಸಂಗ್ರಹ ಸ್ಥಳ, ನೀರಿನ ವ್ಯವಸ್ಥೆ, ಗೋಶಾಲೆಯ ತ್ಯಾಜ್ಯದ ನೀರು ಹರಿಯುವ ವ್ಯವಸ್ಥೆ, ಮೃತಪಟ್ಟ ಹಸುಗಳನ್ನು ಹೂಳುವುದು ಕಾರ್ಮಿಕರ ವಸತಿ ಇತ್ಯಾದಿ ಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಸ್ವಾಮೀಜಿ ಸೂಚಿಸಿದರು.
ಸ್ಥಳೀಯರಾದ ರಮೇಶ್ ಪೂಜಾರಿ, ಸುರೇಶ್ ಶೆಟ್ಟಿ ಸ್ಥಳದ ಮಾಹಿತಿ ನೀಡಿ ಗ್ರಾಮಸ್ಥರ ಪೂರ್ಣ ಸಹಕಾರ ದೊರೆಯುವ ಭರವಸೆ ನೀಡಿದರು. ಸುಬ್ರಹ್ಮಣ್ಯ ಭಟ್, ಸಗ್ರಿ ಅನಂತ ಭಟ್, ಕೃಷ್ಣ ಭಟ್, ಶಿವಪುರ ವಾಸುದೇವ ಭಟ್, ಮಹಾಬಲೇಶ್ವರ ಅಡಿಗ, ಪೆರಂಪಳ್ಳಿ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.