ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜ.31ರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಕೆ : ದ.ಕ. ಡಿಸಿ ಡಾ.ರಾಜೇಂದ್ರ
ರ್ಯಾಲಿ, ಧರಣಿ, ಸಭೆ, ರಾಜಕೀಯ ಪ್ರತಿಭಟನೆ, ಮೆರವಣಿಗೆಗೆ ನಿಷೇಧ

ಮಂಗಳೂರು, ಜ.24: ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದನ್ನು ನಿಯಂತ್ರಿಸಲು, ಪರೀಕ್ಷೆ- ಪತ್ತೆ- ಚಿಕಿತ್ಸೆ- ಲಸಿಕಾಕರಣ ಮತ್ತು ಕೋವಿಡ್ 19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಐದು ತಂತ್ರಗಳ ಮೇಲೆ ನಿರಂತರ ಗಮನಹರಿಸುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜ.31ರ ಬೆಳಗ್ಗೆ 5ರವೆಗೆ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಈಗಾಗಲೇ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದೆ. ಆದಾಗ್ಯೂ ಎಲ್ಲಾ ದಿನಗಳಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾದ್ಯಂತ ರಾತ್ರಿ 10ರಿಂದ ಮುಂಜಾನೆ 5ರವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಉಳಿದಂತೆ ಇತರ ಎಲ್ಲಾ ನಿರ್ಬಂಧಗಳು ಯಥಾವತ್ತಾಗಿ ಮುಂದುವರೆಯುತ್ತದೆ. ಅಂದರೆ ರ್ಯಾಲಿಗಳು, ಧರಣಿಗಳು, ಸಭೆಗಳು, ಸಮುದಾಯ, ಕಾರ್ಮಿಕ ಆಚರಣೆಗಳು, ರಾಜಕೀಯ ಪ್ರತಿಭಟನೆಗಳು, ಮೆರವಣಿಗೆಯಂತಹ ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಜ್ಯ ಸರಕಾರದ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೊರಾಂಗಣ ಪ್ರದೇಶಗಳಲ್ಲಿ 200 ಮತ್ತು ಒಳಾಂಗಣ ಪ್ರದೇಶಗಳಲ್ಲಿ 100 ಜನರಿಗೆ ಮಿತಿಗೊಳಿಸಿ ಮದುವೆಯನ್ನು ನಡೆಸಲು ಅನುಮತಿ ನೀಡಲಾಗಿದೆ.
ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮತ್ತು 2 ಡೋಸ್ಗಳ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಆಸನ ಸಾಮರ್ಥ್ಯವನ್ನು ಶೇ.50ಕ್ಕೆ ಮಿತಿಗೊಳಿಸಿ ಪಬ್ಗಳು/ ಕ್ಲಬ್ಗಳು ರೆಸ್ಟೋರೆಂಟ್ಗಳು, ಬಾರ್ಗಳು, ಹೋಟೆಲ್ಗಳಲ್ಲಿ ತಿನ್ನುವ ಸ್ಥಳಗಳು ಇತ್ಯಾದಿಗೆ ಅನುಮತಿಸಲಾಗಿದೆ. ಅಲ್ಲದೆ ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿ ಕೊಂಡು ಮತ್ತು ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ ಆಸನ ಸಾಮರ್ಥ್ಯವನ್ನು ಶೇ.50ಕ್ಕೆ ಮಿತಿಗೊಳಿಸಿ ಎಲ್ಲಾ ಸಿನೆಮಾ ಹಾಲ್ಗಳು, ಮಲ್ಟಿಪ್ಲೆಕ್ಸ್ಗಳು, ಚಿತ್ರಮಂದಿರಗಳು, ರಂಗಮಂದಿರಗಳು, ಆಡಿಟೋರಿಯಂಗಳು ಮತ್ತಿತರ ಸಭಾಂಗಣಗಳು ಕಾರ್ಯನಿರ್ವಹಿಸಬಹುದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಚಾಲ್ತಿಯಲ್ಲಿರುವ ಸುತ್ತೋಲೆ/ಮಾರ್ಗಸೂಚಿಗಳನ್ವಯ ಕೇರಳದಿಂದ ದ.ಕ.ಜಿಲ್ಲೆಗೆ ಪ್ರವೇಶ ಕಲ್ಪಿಸುವ ಗಡಿಭಾಗಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ಗಳಲ್ಲಿ ತೀವ್ರ ಕಣ್ಗಾವಲು ಮತ್ತು ತಪಾಸಣೆಯನ್ನ ನಡೆಸಲು ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ, ಜನರ ಗುಂಪು, ಸಮುದಾಯ, ಸಂಘ /ಸಂಸ್ಥೆ, ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಇತ್ಯಾದಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸುವುದು ಮತ್ತು ಕೋವಿಡ್ ಸಮುಚಿತ ವರ್ತನೆಗಳನ್ನು ಅನುಸರಿಸದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.







