ಕೋಟೆಕಾರ್ನಲ್ಲಿ ನೂತನ ವಸತಿ ನಿಲಯಗಳ ಉದ್ಘಾಟನೆ
ಮಂಗಳೂರು, ಜ.24: ತಾಲೂಕಿನ ಕೋಟೆಕಾರ್ ಮಡ್ಯಾರ್ ನಲ್ಲಿ ಡಿ. ದೇವರಾಜ ಅರಸ್ ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ನರ್ಸಿಂಗ್ ವಿದ್ಯಾರ್ಥಿ ನಿಲಯಗಳನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಸುಮಾರು ಒಂದು ಸಾವಿರ ಮಕ್ಕಳಿಗೆ ಸುಎಸಜ್ಜಿತವಾದ ಮತ್ತು ಮೂಲಭೂತ ಸೌಕರ್ಯಗಳಿರುವ ನೂತನ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಇನ್ನುಳಿದಂತೆ ರಾಜ್ಯದಾದ್ಯಂತ 1.26 ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಕೆಲವು ಕಡೆ ನೂತನ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಬಾಡಿಗೆ ಕಟ್ಟಡಗಳಲ್ಲಿ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ರಾಜ್ಯದ ಯಾವ ವಿದ್ಯಾರ್ಥಿಯೂ ಕೂಡ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದು ಈ ಯೋಜನೆಯ ಉದ್ದೇಶ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಶಾಸಕರಾದ ಯು.ಟಿ. ಖಾದರ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮಿ ಬೋಳಾರ್, ಸ್ಥಳಿಯ ಪಂಚಾಯತ್ ಸದಸ್ಯರು, ನಿಲಯ ಪಾಲಕರು, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.





