ಮಧ್ಯರಾತ್ರಿಯಲ್ಲಿ ಆನ್ಲೈನ್ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನಿಂದ ಹೊಸ ಇತಿಹಾಸ ಸೃಷ್ಟಿ
ಕೊಚ್ಚಿ,ಜ.25: ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ಹೈಕೋರ್ಟ್ ಸೋಮವಾರ ರಾತ್ರಿ ಆನ್ಲೈನ್ನಲ್ಲಿ ವಿಚಾರಣೆ ನಡೆಸಿದ್ದು, ನೀರು ಪೂರೈಕೆದಾರ ಸಂಸ್ಥೆಗೆ ಬಾಕಿ ಇದ್ದ ಹಣವನ್ನು ಪಾವತಿಸಲು ನಿರಾಕರಿಸಿದ್ದಕ್ಕಾಗಿ ಕೊಚ್ಚಿ ಬಂದರಿನಲ್ಲಿ ಲಂಗರುಹಾಕಿರುವ ಹಡಗನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದೆ.
ಕೇರಳ ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಸೋಮವಾರ ರಾತ್ರಿ 11:30ರ ವೇಳೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದರೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು. ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಕೂಡಾ ವಿಚಾರಣಾ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಮಧ್ಯರಾತ್ರಿಯವರೆಗೂ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಎಂ.ವಿ.ಒಶಿಯನ್ ರೋಸ್ ಹಡಗನ್ನು ಮುಟ್ಟುಗೋಲು ಹಾಕಲು ಆದೇಶವನ್ನು ಜಾರಿಗೊಳಿಸುವಂತೆ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿತು. ಹಡಗಿಗೆ ಸಂಬಂಧಿಸಿದ ಎಂಜಿನ್ಗಳು, ಯಂತ್ರೋಪಕರಣ, ದೋಣಿಗಳು, ಬಂಕರ್ಗಳು ಹಾಗೂ ಸಲಕರಣೆಗಳನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಿತು. ಎ.ವಿ.ಓಶಿಯನ್ ರೋಸ್ ಹಡಗು ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿತ್ತು. ಹಡಗನ್ನು ಮುಟ್ಟುಗೋಲು ಹಾಕಲು ಅಥವಾ ಹಡಗಿನ ಮಾಲಕರನ್ನು ಬಂಧಿಸುವಂತೆಯೂ ನ್ಯಾಯಾಲಯವು ಕೊಚ್ಚಿ ಬಂದರಿನ ಉಪ ಸಂರಕ್ಷಣಾಧಿಕಾರಿಗೆ ಸೂಚಿಸಿತು.
ಹಡಗಿನ ಮಾಲಕರು 2 ಕೋಟಿ ರೂ. ಹಣವನ್ನು ನೀರು ಪೂರೈಕೆ ಮಾಡುವ ಸಂಸ್ಥೆಗೆ ನೀಡಬೇಕಿತ್ತು. ಕೊಚ್ಚಿಯ ಫ್ಯಾಕ್ಟ್ ರಸಗೊಬ್ಬರ ಕಾರ್ಖಾನೆಗೆ ಬೇಕಾದ ರಂಜಕವನ್ನು ಈ ಹಡಗು ಹೊತ್ತು ತಂದಿತ್ತು. ಮಂಗಳವಾರ ಬೆಳಗ್ಗೆ 5:00 ಗಂಟೆಗೆ ಈ ಹಡಗು ಕೊಚ್ಚಿಯ ಬಂದರಿನಿಂದ ನಿರ್ಗಮಿಸುವುದರಲ್ಲಿ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ರಾತ್ರಿ 11:30ರ ವೇಳೆಗೆ ವಿಚಾರಣೆಗೆ ಆದೇಶಿಸಿತು
ಒಂದು ವೇಳೆ ಹಡಗಿನ ಮಾಲಕರು 2,43,75,000 ರೂ.ಗಳನ್ನು ತಾವು ಹಣ ಪಾವತಿಸಲು ಬಾಕಿಯಿರುವ ಕಂಪೆನಿಯಲ್ಲಿ ಬಡ್ಡಿ ಸಮೇತವಾಗಿ ಠೇವಣಿಯಿರಿಸಿದಲ್ಲಿ ಹಾಗೂ 25 ಸಾವಿರ ರೂ. ವೆಚ್ಚವನ್ನು ಭರಿಸಿದಲ್ಲಿ ಅವರ ವಿರುದ್ಧದ ಬಂಧನ ವಾರಂಟ್ ಅನ್ನು ಹಿಂಪಡೆಯುವಂತೆಯೂ ಕೋರ್ಟ್ ಆದೇಶಿಸಿತು.
ಬಂಧನದ ವಾರಂಟ್ ಜಾರಿಗೊಳಿಸಿದ ಬಳಿಕ ಹಡಗು ಹದಿನೈದು ದಿನಗಳೊಳಗೆ ಭದ್ರತಾ ಖಾತರಿಯನ್ನು ಸಲ್ಲಿಸದೆ ಇದ್ದಲ್ಲಿ ಅಥವಾ ಬಂಧನ ವಾರಂಟ್ ತೆರವುಗೊಳಿಸುವಂತೆ ಕೋರುವ ಅರ್ಜಿಯನ್ನು ಸಲ್ಲಿಸದೆ ಇದ್ದಲ್ಲಿ, ಆನಂತರದ ಏಳು ದಿನಗಳೊಳಗೆ ಹಡಗಿನ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಾಲಯವು ಜನವರಿ 27ರಂದು ನಡೆಸಲಿದೆ.