ಹಿಜಾಬ್ ವಿವಾದ ಬಗೆಹರಿಸದಿದ್ದರೆ ಹೈಕೋರ್ಟ್ನಲ್ಲಿ ದಾವೆ: ಬಹುಕ್ರಾಂತಿ ಮೋರ್ಚಾ

ಫೈಲ್ ಫೋಟೊ
ಉಡುಪಿ, ಜ.25: ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿವಾದವನ್ನು ನ್ಯಾಯ ಸಮ್ಮತವಾಗಿ ಇತ್ಯರ್ಥಗೊಳಿಸುವಂತೆ ಬಹುಕ್ರಾಂತಿ ಮೋರ್ಚಾದ ರಾಜ್ಯ ಸಂಯೋಜಕ ಉದಯ ಕುಮಾರ್ ತಲ್ಲೂರು ಪ್ರಾಂಶುಪಾಲರನ್ನು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿಯರ ಧಾರ್ಮಿಕ ನಿಯಮಾನುಸಾರ ಜಾರಿಯಲ್ಲಿರುವ ಶಿರವಸ್ತ್ರ ಧರಿಸಲು ಅವಕಾಶ ನೀಡದೆ, ತರಗತಿಯಿಂದ ಹೊರಗಿಟ್ಟಿರುವುದು ಮಾತ್ರವಲ್ಲದೆ ಆ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರುವುದು ಸರಿಯಲ್ಲ. ಶಿರವಸ್ತ್ರ ಧರಿಸುವ ಪದ್ಧತಿಯು ಈ ಹಿಂದೆ ಕಲಿತ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಕೂಡ ಪಾಲಿಸುತ್ತ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇದೊಂದು ವಿವಾದವಾಗಲು ಕಾರಣ ಏನು ಎಂಬುದು ಮೋರ್ಚಾ ಸವಿಸ್ತಾರವಾಗಿ ಅಧ್ಯಯನ ನಡೆಸಿದೆ.
ಶಿರವಸ್ತ್ರ ಧರಿಸುವುದು ವಿದ್ಯಾರ್ಥಿನಿಯರ ಸಂವಿಧಾನಿಕ ಹಕ್ಕು ಆಗಿದ್ದು, ಅದನ್ನು ನಿರಾಕರಿಸುವ ಅಥವಾ ಕಸಿದುಕೊಳ್ಳುವ ಅಧಿಕಾರ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಅಲ್ಲಿನ ಅಧಿಕಾರಿಗಳಿಗೆ ಸಂವಿಧಾನ ನೀಡಿರುವುದಿಲ್ಲ. ಈ ವಿವಾದ ವನ್ನು ಮುಂದಿನ ಒಂದು ವಾರದೊಳಗಾಗಿ ಸಂವಿಧಾನ ಬದ್ಧವಾಗಿ ಇತ್ಯರ್ಥ ಗೊಳಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ವಿವಾದದ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ವಿಫಲರಾದಲ್ಲಿ ಹೈಕೋರ್ಟ್ನಲ್ಲಿ ಪ್ರಾಂಶುಪಾಲರ ವಿರುದ್ಧ ಸಂಘಟನೆ ವತಿಯಿಂದ ದಾವೆ ಹೂಡುವ ಅನಿವಾರ್ಯತೆ ಒದಗಿ ಬರಲಿದೆ ಎಂದು ಉದಯ ಕುಮಾರ್ ತಲ್ಲೂರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.