ಕೈಪುಂಜಾಲು: ಕಡಲ್ಕೊರೆತ ಭೀತಿಯಲ್ಲಿ ಸ್ಥಳೀಯ ನಿವಾಸಿಗಳು

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಪೊಲಿಪು ಪಡು ಯಾರ್ಡ್ ಬೀಚ್ನಿಂದ ಪೊಲಿಪು ಸುಮಾರು 1.25 ಕಿಮೀ ಭಾಗದ ನಿವಾಸಿಗಳಿಗೆ ಕಡಲ್ಕೊರೆತ ಭೀತಿ ಉಂಟಾಗಿದೆ.
ಕಳೆದ ಮಳೆಗಾಲ ಸಂದರ್ಭದಲ್ಲಿ ತಡೆಗೋಡೆ ನಿರ್ಮಾಣ ಮಾಡುವಂತೆ ಜನರು, ಜನಪ್ರತಿನಿಧಿಗಳಿಗೆ ಒತ್ತಡ ಹೇರಿದ್ದರು. ಶಾಸಕ, ಸಂಸದರು, ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಅನುದಾನ ಮಂಜೂರಾಗದೆ ಮುಂಚಿತ ಕಾಮಗಾರಿ ನಡೆಸಲು ಇಲಾಖೆ ಹಾಗೂ ಗುತ್ತಿಗೆದಾರರು ಹಿಂದೇಟು ಹಾಕಿದ ಪರಿಣಾಮ ಅದು ನೆನೆಗುದಿಗೆ ಬಿದ್ದಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಾಲ್ಕು ತಿಂಗಳ ಹಿಂದೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶೀಘ್ರ ತಡೆಗೋಡೆ ನಿರ್ಮಾಣದ ಭರವಸೆಯನ್ನು ನೀಡಿದ್ದರು. ಅವರು ನೀಡಿದ ಭರವಸೆಯಂತೆ ಕಾಮಗಾರಿಗೆ ಮುಂದಡಿ ಇಡಲಾಗಿತ್ತು. ಕಾಮಗಾರಿಗಾಗಿ ರಸ್ತೆ ನಿರ್ಮಾಣಕ್ಕೆ ಖಾಸಗಿ ಜಮೀನಿನವರು ಅವಕಾಶ ನೀಡದ ಕಾರಣ ಗುತ್ತಿಗೆದಾರರೊಬ್ಬರು 10 ವರ್ಷಗಳ ಹಿಂದೆ ನಿರ್ಮಿಸಿರುವ ತಡೆಗೋಡೆಯನ್ನೇ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ತೆರವುಗೊಳಿಸಿ ತಿಂಗಳು ನಾಲ್ಕು ಆದರೂ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲಿಲ್ಲ ಸ್ಥಳೀಯ ಮೀನುಗಾರ ಮುಖಂಡ ವಿಜಯ ಕರ್ಕೇರ ಹೇಳುತ್ತಾರೆ.
ಶಾಶ್ವತ ತಡೆಗೋಡೆ ನಿರ್ಮಿಸುತ್ತೇವೆ ಎಂದು ಹೇಳಿ 4 ಅಡಿ ಎತ್ತರವಿದ್ದ ತಡೆಗೋಡೆಯನ್ನು ತೆರವುಗೊಳಿಸಿ ತಿಂಗಳು ನಾಲ್ಕು ಆದರೂ ಇದುವರೆಗೆ ಯಾವುದೇ ಕಾಮಗಾರಿಗೆ ಮುಂದಾಗಲಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದು, 8 ಕೋಟಿ ರೂ. ಅನುದಾನ ದೊರಕಿಸಿ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆದೆ ಇದುವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರಾದ ಮನೋಜ್ ಪುತ್ರನ್ ನೋವು ತೋಡಿಕೊಂಡರು.
ಹಲವು ವರ್ಷಗಳಿಂದ ಇಲ್ಲಿ ವಾಸಿಸುತಿದ್ದೆವು. ಸಮುದ್ರ ಕೊರತೆಯಿಂದಾಗಿ ನಾವು ಜಾಗ ಈಗಾಗಲೇ ಕಳೆದುಕೊಂಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಮತ್ತಷ್ಟು ಭಯ ಉಂಟಾಗಿದೆ. ಕಲ್ಲು ತೆಗೆದು ಕೆಳಗೆ ಹಾಕಿರುವುದರಿಂದ ಮುಂದಿನ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ಭಯದ ವಾತಾವರಣದಲ್ಲಿ ಜೀವನ ನಡೆಸುತಿದ್ದೇನೆ. ನಾನೊಬ್ಬಳ ಇದ್ದೇನೆ ಎಂದು ಸ್ಥಳೀಯ ನಿವಾಸಿ ಕಮಲ ಹೇಳುತ್ತಾರೆ.
ಕಳೆದ ಚಂಡುಮಾರುತದಿಂದ ಅಪಾರ ಹಾನಿಯಾಗಿದ್ದು, ಪ್ರಾಕೃತಿಕ ವಿಕೋಪದ ತುರ್ತು ಸಂದರ್ಭದಲ್ಲಿ ಶಾಸಕರ ಶಿಫಾರಸಿನಂತೆ ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಅಂದು ಗುತ್ತಿಗೆದಾರರು ನಿರ್ಮಿಸಿದ್ದ ತಡೆಗೋಡೆಯನ್ನು ಸರಿಪಡಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಈ ಭಾಗದ ಶಾಶ್ವತ ತಡೆಗೋಡೆಗೆ ಕಾಮಗಾರಿಗೆ ಮಂಜೂರಾತಿ ದೊರಕಲಿದೆ. ಎರ್ಮಾಳಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣವಾಗಿದ್ದು, ಈ ಭಾಗದಲ್ಲೂ ಶಾಶ್ವತ ತಡೆಗೋಡೆ ನಿರ್ಮಾಣದಿಂದ ಕಡಲ್ಕೊರೆತ ಭೀತಿ ದೂರವಾಗಲಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
