ಫೆ.14 ರಿಂದ 25ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜ.27: ವಿಧಾನಮಂಡಲದ ಜಂಟಿ ಅಧಿವೇಶನವನ್ನು ಫೆ.14 ರಿಂದ 25ರವರೆಗೆ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಸಭೆಯ ನಂತರ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ ಎಂದರು.
ಕೋವಿಡ್ ಸ್ಥಿತಿಗತಿ, ಕೋವಿಡ್ ನಿರ್ವಹಣೆ, ಶಾಲಾ-ಕಾಲೇಜು ಹಾಗೂ ಸಂಘ ಸಮಸ್ಥೆಗಳ ಮನವಿಗಳನ್ನು ತಜ್ಞರ ಸಮಿತಿಯ ಮುಂದೆ ಇರಿಸಲಾಗಿದ್ದು, ತಜ್ಞರ ವರದಿ ಬಂದ ನಂತರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಿಬಿಎಂಪಿ ಚುನಾವಣೆ: ಬಿಬಿಎಂಪಿ ಚುನಾವಣೆಯ ಬಗ್ಗೆ ಚರ್ಚಿಸಲಾಗಿದ್ದು, ಬೆಂಗಳೂರಿನ ಸಚಿವರೊಂದಿಗೆ ಇತರ ಜಿಲ್ಲೆಗಳ ಸಚಿವರನ್ನೂ ನಿಯೋಜಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸರಕಾರದ 6 ತಿಂಗಳ ಸಾಧನೆಗಳ ಪ್ರಚಾರ: ಸರಕಾರ 6 ತಿಂಗಳ ಆಡಳಿತ ಪೂರೈಸಿರುವ ಹಿನ್ನಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. 2023 ವರೆಗಿನ ಸರಕಾರದ ಕಾರ್ಯಕ್ರಮಗಳು, ಈ 6 ತಿಂಗಳ ಅವಧಿಯಲ್ಲಿ ಸರಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಚಿಂತನ-ಮಂಥನ ಸಭೆ: ಬರುವ ದಿನಗಳಲ್ಲಿ ಪಕ್ಷ, ಸಂಘಟನೆ ಹಾಗೂ ಸರಕಾರದ ಮಧ್ಯೆ ಸಮನ್ವಯ ಸಾಧಿಸುವ ಚಿಂತನ-ಮಂಥನ ಸಭೆಯನ್ನು ಪಕ್ಷದ ಅಧ್ಯಕ್ಷರು ಶೀಘ್ರದಲ್ಲಿ ನಡೆಸಲಿದ್ದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವ ತೀರ್ಮಾನವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ: ರೇಸ್ ಕೋರ್ಸ್ನಲ್ಲಿ ನಡೆಯುವ ಡರ್ಬಿ ರೇಸ್ನಲ್ಲಿ ಸಾವಿರಾರು ಜನ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಯಾವುದೇ ಅವಕಾಶವಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗಬೇಕು. ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಸಭೆಗಳನ್ನು ನಡೆಸುವ ಮೂಲಕ ಬೆಂಗಳೂರಿನ ಬಿಜೆಪಿಗೆ ಅನುಕೂಲವಾಗಲು ಹಾಗೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಇರುವುದೇ ಆರೋಪ ಮಾಡಲು. ಅವರ ಸರಕಾರ ಇದ್ದಾಗ ಏನೆಲ್ಲಾ ಮಾಡಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.







