ಬಂಟ್ವಾಳ: ಸೇತುವೆಯಿಂದ ನೀರಿಗೆ ಹಾರಿ ವೃದ್ಧ ಆತ್ಮಹತ್ಯೆ

ಬಂಟ್ವಾಳ, ಜ.29: ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಶನಿವಾರ ಬೆಳಗ್ಗೆ ಪಾಣೆಮಂಗಳೂರು ಸಮೀಪದ ನಂದಾವರ ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅವರು ಪ್ರಗತಿಪರ ಕೃಷಿಕರು ಎನ್ನಲಾಗಿದೆ. ತಲೆನೋವು ಮೊದಲಾದ ಸಣ್ಣ ಪುಟ್ಟ ಖಾಯಿಲೆಯಿಂದ ಬಳಲುತ್ತಿದ್ದರು ಎಂದಿರುವ ಸ್ಥಳೀಯರು, ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಶಂಕಿಸಿದ್ದಾರೆ.
ಶನಿವಾರ ಬೆಳಗ್ಗೆ ಮನೆಯಿಂದ ಪಾಣೆಮಂಗಳೂರು ಪೇಟೆಗೆ ಬಂದ ಅವರು ಅಲ್ಲಿಂದ ಅಟೋ ರಿಕ್ಷಾದಲ್ಲಿ ನಂದಾವರ ಕಡೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ರೀತಿ ಬಂದವರು ಶ್ರೀ ಶಾರದಾ ಪ್ರೌಢಶಾಲೆ ಬಳಿ ಇರುವ ನಂದಾವರ ಕಿರು ಸೇತುವೆಯ ಮೇಲಿಂದ ನೀರಿಗೆ ಹಾರಿ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಳ್ಳಾಲ- ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲೆತ್ನಿಸಿದ ಪ್ರಿಯಕರ ಮೃತ್ಯು
ಘಟನೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಗೂಡಿನಬಳಿಯ ಜೀವರಕ್ಷಕ ಈಜುಪಟು ಮುಹಮ್ಮದ್ ಮಮ್ಮು ಅವರ ನೇತೃತ್ವದ ಯುವಕರ ತಂಡ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
