ಬ್ರೈಟ್ ಇಂಡಿಯಾ ಸಂಸ್ಥೆಯ ಸ್ಥಾಪಕ ಕೆ. ವಿ. ಶೆಟ್ಟಿ ನಿಧನ

ಕಾಪು: ಬ್ರೈಟ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಕ ಕಾಪು ಉಳಿಯಾರಗೋಳಿ ನಿವಾಸಿ ಕೆ. ವಿ. ಶೆಟ್ಟಿ (86) ಅವರು ಶನಿವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಬ್ರೈಟ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕವಾಗಿ ಸಮಾಜದ ಜನರಲ್ಲಿ ಕುಷ್ಠ ರೋಗ ಮತ್ತು ರೋಗಿಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಡೆಸುತ್ತಿದ್ದರು.
ಕುಷ್ಠರೋಗ ನಿವಾರಣೆಯ ಕುರಿತು 1981ರಲ್ಲಿ ಇಂಗೀಷ್ನಲ್ಲಿ 'ಅನ್ಟೋಲ್ಡ್ ಟ್ರುತ್ ಅಬೌಟ್ ಲೆಪ್ರೊಸಿ' ಮತ್ತು 1995'ರಲ್ಲಿ ಪ್ರೊವೊಕಿಂಗ್ ಥಾಟ್ಸ್ ಆನ್ ಲೆಪ್ರೊಸಿ' ಎಂಬ ಎರಡು ಪುಸ್ತಕವನ್ನು ಬರೆದು ಪ್ರಕಾಶಿಸಿದ್ದು, ಈ ಪುಸ್ತಕವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗಿದೆ.
ಕುಷ್ಠರೋಗದ ವಿರುದ್ಧ ಯುದ್ಧ, ಭರವಸೆಯ ಬೆಳಕು ಎಂಬ ಎರಡು ಪುಸ್ತಗಳನ್ನು ಬರೆದಿದ್ದು ಈ ಪುಸ್ತಕಗಳನ್ನು ಶಾಲಾ ಕಾಲೇಜುಗಳು ಮತ್ತು ಇತರ ಗ್ರಂಥಾಲಯಗಳಲ್ಲಿ ಇಡಬೇಕೆಂದು ಕರ್ನಾಟಕ ಸರಕಾರ ಸುತ್ತೋಲೆ ಕೊಟ್ಟಿದೆ. ಹಾಗೆಯೇ ಕೇಂದ್ರ ಸರಕಾರದ ಡೈರೆಕ್ಟರ್ ಜನರಲ್ ಆಫ್ ಲೆಪ್ರೊಸಿ ಕೂಡಾ ಇವರ ಪುಸ್ತಕಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿತ್ತು.
ಬ್ರೈಟ್ ಇಂಡಿಯಾ ಕಾರ್ಯದರ್ಶಿ ಮತ್ತು ಕಾರ್ಯ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಅವರ ಕಾರ್ಯ ಚಟುವಟಿಕೆಗಳನ್ನು ನೋಡಿ ಇಂಗ್ಲೆಂಡ್ನ ಲೆಪ್ರೊಸಿ ಮಿಶನ್ ಇಂಟರ್ನ್ಯಾಷನಲ್ ಕ್ರೈಸ್ತ ಮಿಶನರಿ ಸಂಸ್ಥೆಯು 2009ರಲ್ಲಿ ವೆಲ್ಲೆಸ್ಲಿ ಬಲಿ ಅಂತರಾಷ್ಟ್ರೀಯ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಕರ್ನಾಟಕ ರಾಜ್ಯ ಸರಕಾರವು ಸ್ವಾತಂತ್ರ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಸರಕಾರಿ ಸಂಸ್ಥೆಗಳು, ಸಂಘ ಸಂಸ್ಥೆಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಇವರನ್ನು ಸಮ್ಮಾನಿಸಿ, ಗೌರವಿಸಿದ್ದವು.
ಉಡುಪಿ ಪುತ್ತಿಗೆ ಶ್ರೀ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸುರೇಶ್ ಪಿ. ಶೆಟ್ಟಿ ಗುರ್ಮೆ ಮೊದಲಾದವರು ಸಂತಾಪ ಸೂಚಿಸಿದ್ದಾರೆ.