''ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ'': ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು, ಜ. 30: `ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, `ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಜನಹಿತಕ್ಕಾಗಿ ನಾವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ, ನೀವು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ' ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಿದ್ದರಾಮಯ್ಯ ಅವರಿಂದ ಹೆಚ್ವಿನದೇನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನಹಿತ ಏನಾಗಿದೆ ಎನ್ನುವುದನ್ನು ನೋಡಬೇಕು. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು. ನಮ್ಮ ಪ್ರಣಾಳಿಕೆಯ ಘೋಷಣೆಗಳಲ್ಲಿ ಶೇ.96ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಅವರು ಹೇಳಿದ್ದರು. ಆದರೂ ಜನ ತಿರಸ್ಕಾರ ಮಾಡಿದರು ಏಕೆ?' ಎಂದು ಪ್ರಶ್ನಿಸಿದರು.
`ಜನಪರ ಕ್ರಾರ್ಯಕ್ರಮದ ಘೋಷಣೆ ಮಾತ್ರವಲ್ಲ, ಅನುಷ್ಟಾನವೂ ಆಗಬೇಕು. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಯಾವ ರೀತಿ ಅನುಷ್ಠಾನ ಮಾಡಿದರೆ ಯಾರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು ದುಡಿಯುವ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಎಲ್ಲ ಸಮುದಾಯಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಅರಿವಿದೆ ಎಂದು ಹೇಳಿದರು.
ಅಭಿವೃದ್ಧಿಯ ಭಿನ್ನ ದೃಷ್ಟಿಕೋನ: `ಮೈಸೂರಿನಲ್ಲಿ ಸಂಸದರು ಹಾಗೂ ಶಾಸಕರ ನಡುವೆ ಯಾವುದೇ ಜಗಳ ಇಲ್ಲ. ಅದು ಅಭಿವೃದ್ಧಿ ಆಗಬೇಕೆನ್ನುವ ವಿಭಿನ್ನ ದೃಷ್ಟಿಕೋನಗಳು. ಶಾಸಕರು ಮತ್ತು ಸಂಸದರನ್ನು ಕರೆದು ಮಾತನಾಡುವೆ. ಏನೇ ಸಮಸ್ಯೆ, ಭಿನ್ನಾಭಿಪ್ರಾಯಗಳಿದ್ದರೂ ಚರ್ಚಿಸಿ ಪರಿಹಾರ ಮಾಡಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದರು.
ಕಾಂಗ್ರೆಸ್ ಒಳಜಗಳ: ಕಾಂಗ್ರೆಸ್ನಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಒಳಜಗಳ ಬೀದಿಗೆ ಬಂದಿದೆ. ಅದು ಅವರ ಆಂತರಿಕ ವಿಚಾರವಾದರೂ, ಸಾರ್ವತ್ರಿಕವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಇದೊಂದೇ ಪ್ರಸಂಗವಲ್ಲ, ಹಲವಾರು ಆಗಿವೆ. ಈಗ ಅದು ಬಹಿರಂಗವಾಗಿದೆ. ಆದರೆ, ಕಾಂಗ್ರೆಸ್ ಯಾವಾಗಲೂ ಜನಹಿತಕ್ಕಾಗಿ ಎಂದೂ ಕೆಲಸ ಮಾಡಿಲ್ಲ' ಎಂದು ಟೀಕಿಸಿದರು.
`ಆಡಳಿತ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ, ವಿರೋಧ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ. ಅಧಿಕಾರವನ್ನು ಹೇಗೆ ಹಿಡಿಯಬೇಕು, ಯಾವ ರೀತಿ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಬೇಕು ಎನ್ನುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಯಾರೇ ನಾಯಕರಾಗಲಿ, ತಮ್ಮ ನೀತಿ ನಿಲುವುಗಳು, ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಅದು ಅವರ ಗುಣಧರ್ಮ ಎಂದು ಅವರು ಲೇವಡಿ ಮಾಡಿದರು.
ಸಂಪುಟ ವಿಸ್ತರಣೆ: `ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ. ವರಿಷ್ಟರು ಕರೆದಾಗ ದಿಲ್ಲಿಗೆ ಹೋಗಲು ಸಿದ್ಧನಿದ್ದೇನೆ. ಬಜೆಟ್ ಸಂದರ್ಭದಲ್ಲಿ ಸಂಸದರನ್ನು ಭೇಟಿಯಾಗುವ ಸಂಪ್ರದಾಯವಿದೆ. ಆದಷ್ಟು ಬೇಗ ಸಂಸದರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸುತ್ತೇನೆ ಎಂದು ಅವರು ತಿಳಿಸಿದರು. ನಿಗಮ ಮಂಡಳಿಗಳ ನೇಮಕಾತಿ ಕುರಿತು ಪಕ್ಷದಲ್ಲಿ ಆಂತರಿಕವಾಗಿ ತೀರ್ಮಾನ ಮಾಡಲಾಗುತ್ತದೆ. ಆ ಬಳಿ ಪ್ರಕಟಿಸಲಾಗುತ್ತದೆ ಎಂದು ಅವರು ಪ್ರಶ್ನೊಂದಕ್ಕೆ ಉತ್ತರ ನೀಡಿದರು.







