ಅಕ್ರಮ ದನ ಸಾಗಾಟದ ವಿರುದ್ಧ ಕಾರ್ಯಾಚರಣೆ: ಎಸ್ಸೈ ಸಹಿತ ಇಬ್ಬರು ಪೊಲೀಸರಿಗೆ ಗಾಯ; ಓರ್ವನ ಬಂಧನ
![ಅಕ್ರಮ ದನ ಸಾಗಾಟದ ವಿರುದ್ಧ ಕಾರ್ಯಾಚರಣೆ: ಎಸ್ಸೈ ಸಹಿತ ಇಬ್ಬರು ಪೊಲೀಸರಿಗೆ ಗಾಯ; ಓರ್ವನ ಬಂಧನ ಅಕ್ರಮ ದನ ಸಾಗಾಟದ ವಿರುದ್ಧ ಕಾರ್ಯಾಚರಣೆ: ಎಸ್ಸೈ ಸಹಿತ ಇಬ್ಬರು ಪೊಲೀಸರಿಗೆ ಗಾಯ; ಓರ್ವನ ಬಂಧನ](https://www.varthabharati.in/sites/default/files/images/articles/2022/01/30/323291-1643557312.jpg)
ಕಾರ್ಕಳ, ಜ.30: ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಜ.30ರಂದು ಬೆಳಗಿನ ಜಾವ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಾರನ್ನು ತಡೆಯಲು ಮುಂದಾದ ಪೊಲೀಸರ ಮೇಲೆ ಹತ್ತಿಸಲು ಪ್ರಯತ್ನಿಸಿದ ಪರಿಣಾಮ ಎಸ್ಸೈ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆನ್ನಾದ ಬಗ್ಗೆ ವರದಿಯಾಗಿದ್ದು, ಈ ಸಂಬಂಧ ಓರ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಳ ಚೌಕಿಯ ಸುರೇಶ ಎಂಬಾತನ ಮಾಹಿತಿಯಂತೆ ಸೈಯದ್ ಜುಹಾದ್ ಬೈಕಿನಲ್ಲಿ ಹಾಗೂ ಆತನ ಸಂಬಂಧಿ ಫಿರೋಜ್ ಹಾಗೂ ಮೈಯದ್ದಿ ಎಂಬವರು ಕಾರಿನಲ್ಲಿ ನಲ್ಲೂರಿನ ರಸ್ತೆಯಲ್ಲಿ ಮಲಗಿದ್ದ ದನಗಳನ್ನು ಕಳವು ಮಾಡಿ, ಕಾರಿನಲ್ಲಿ ತುಂಬಿಸಿಕೊಂಡು ಮಾಳ ಚೌಕಿ ಕಡೆಗೆ ಹೋಗುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರನ್ನು ತಡೆಯಲು ಸೂಚಿಸಿದರು. ಆದರೆ ಅವರು ಕಾರನ್ನು ನಿಲ್ಲಿಸದೇ ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದರೆನ್ನಲಾಗಿದೆ. ಆಗ ತಪ್ಪಿಸಿಕೊಂಡು ರಸ್ತೆಗೆ ಬಿದ್ದ ಎಸ್ಸೈ ತೇಜಸ್ವಿ ಟಿ.ಐ. ಹಾಗೂ ಸಿಬ್ಬಂದಿ ರಂಜಿತ್ ಕುಮಾರ್ ಗಾಯಗೊಂಡರೆಂದು ದೂರಲಾಗಿದೆ.
ಬಳಿಕ ಪೊಲೀಸರು ಹುಕ್ರಟ್ಟೆ ಕ್ರಾಸ್ ಸಮೀಪ ಬೈಕ್ ಸವಾರ ಸೈಯದ್ ಜುಹಾದ್ ನನ್ನು ಬಂಧಿಸಿದರು. ಕಾರಿನ ಚಾಲಕ ಕಾರನ್ನು ಅತೀವೇಗದಿಂದ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.