ಬೆಂಗಳೂರು: ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಯುವತಿಗೆ ಆಮಿಷವೊಡ್ಡಿದ ಆರೋಪ; ಓರ್ವನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ. 30: ಇಂಜಿನಿಯರಿಂಗ್ ಪದವಿಗಾಗಿ ಪ್ರವೇಶ ಕಲ್ಪಿಸುವುದಾಗಿ ಆಮಿಷವೊಡ್ಡಿ ವಂಚನೆ ನಡೆಸುತ್ತಿದ್ದ ಓರ್ವವವನ್ನು ಇಲ್ಲಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರ್ ಬಂಧಿತ ಆರೋಪಿ ಆಗಿದ್ದು, ರೇವಾ ಕಾಲೇಜಿನಲ್ಲಿ ಯುವತಿಗೆ ಸೀಟ್ ಕೊಡಿಸುವುದಾಗಿ ಹೇಳಿ 1 ಲಕ್ಷದ 27 ಸಾವಿರ ಹಣ ಪಡೆದು ವಂಚಿಸಿದ್ದರು ಎಂದು ಹೇಳಲಾಗುತ್ತಿದೆ.
ಯುವತಿ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ಗೆ ಸೇರಿದ್ದಳು. ಎಸಿಎಂ ಬ್ರಾಂಚ್ ಪಡೆದಿದ್ದ ಕಂಪ್ಯೂಟರ್ ಸೈನ್ಸ್ ಸೀಟ್ಗಾಗಿ ಪ್ರಯತ್ನಿಸುತ್ತಿದ್ದಳು. ಇದನ್ನು ಅರಿತ ಆರೋಪಿ ಯುವತಿ ಮೊಬೈಲ್ಗೆ ಸಂದೇಶ ಕಳುಹಿಸಿ ಸೀಟು ಕೊಡಿಸುವುದಾಗಿ ಆಮಿಷವೊಡ್ಡಿದ್ದ ಎನ್ನಲಾಗಿದೆ.
ಅದರಂತೆ ಯುವತಿಯ ತಂದೆ 1.27 ಲಕ್ಷ ರೂ. ನೀಡಿದ್ದರು. ಆ. 13ರಂದು ಆರೋಪಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ಬಳಿಕ ಹಣ ಪಡೆದು ಆರೋಪಿ ಮೊಬೈಲ್ ಸಂಪರ್ಕ ಕಡಿತ ಮಾಡಿಕೊಂಡಿದ್ದ. ಕಾಲೇಜಿನಲ್ಲಿ ವಿಚಾರಿಸಿದಾಗ ಆತ ಕಾಲೇಜು ಸಿಬ್ಬಂದಿ ಅಲ್ಲ ಎನ್ನುವುದು ತಿಳಿದು ಬಂದಿತ್ತು.
ಘಟನೆ ಸಂಬಂಧ ಯುವತಿ ತಂದೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆ ಆರೋಪಿ ರಾಜೇಶ್ವರ್ ನನ್ನು ಪೊಲೀಸರು ಬಂಧಿಸಿ 3 ಮೊಬೈಲ್, 4 ಲ್ಯಾಪ್ಟಾಪ್, 7 ಸಿಮ್ ಕಾರ್ಡ್, 21 ಗ್ರಾಂ ಚಿನ್ನಾಭರಣ, ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







