ಪ್ರಚೋದನಾಕಾರಿ ಭಾಷಣದ ಹೆಸರಿನಲ್ಲಿ ಅಮಾಯಕರನ್ನು ಬಂಧಿಸಿದ ಪೋಲಿಸರು: ಪಿಎಫ್ ಐ ಆರೋಪ

ಬೆಂಗಳೂರು, ಜ. 30: `ಪ್ರಚೋದನಾಕಾರಿ ಭಾಷಣದ ವಿಚಾರದಲ್ಲಿ ಘಟನೆ ಸಂಬಂಧ ಪಡದ ಸ್ಥಳೀಯ ಮುಸ್ಲಿಮ್ ನಾಯಕರನ್ನು ಬಂಧಿಸುತ್ತಿರುವ ಇಳಕಲ್ ಪೊಲೀಸರು ಪಕ್ಷಪಾತಿ ಕ್ರಮವನ್ನು ಅನುಸರಿಸುತ್ತಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿರುವುದು ನಿಜವಾದರೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಅವರ ವಿರುದ್ಧ ಕ್ರಮಕೈಗೊಳ್ಳಬೇಕೇ ಹೊರತು ಘಟನೆಗೆ ಸಂಬಂಧಪಡದವರ ವಿರುದ್ಧ ಪೌರುಷ ತೋರಿಸಿರುವುದು ಖಂಡನೀಯವಾಗಿದೆ' ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಿಳಿಸಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ನಲ್ಲಿರುವ ಮೌಲಾನಾ ಆಝಾದ್ ವೃತ್ತದಲ್ಲಿ ಜ.14ರಂದು ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಎಐಎಂಐಎಂ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ ಹುಮ್ನಾಬಾದ್ರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಸ್ಮಾನ್ ಘನಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಜನವರಿ 15ರಂದು ಉಸ್ಮಾನ್ ಘನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ಉಸ್ಮಾನ್ ಘನಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆಂದು ತಿಳಿಸಿದೆ.
ಈ ಮಧ್ಯೆ ಪೊಲೀಸರು ಕಾನೂನುಬಾಹಿರವಾಗಿ ಅಮಾಯಕರ ಭೇಟೆಗೆ ಇಳಿದಿದ್ದಾರೆ. ಉಸ್ಮಾನ್ ಘನಿಯನ್ನು ಬಂಧಿಸಲು ವಿಫಲವಾದ ಪೊಲೀಸರು ಅಮಾಯಕರನ್ನು ರಾತ್ರೋ ರಾತ್ರಿ ವಶಕ್ಕೆ ಪಡೆದು ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಉಸ್ಮಾನ್ ಘನಿ ಅವರ ಪತ್ನಿ, ಪುತ್ರಿಯನ್ನು ಕೂಡ ಠಾಣೆಗೆ ಎಳೆದೊಯ್ದು ದೌರ್ಜನ್ಯ ಎಸಗಲಾಗಿದೆ. ಇದನ್ನು ಖಂಡಿಸಿ ಸ್ಥಳೀಯರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆಗೆ ಮುಂದಾದ ಬಳಿಕ ವಶಕ್ಕೆ ಪಡೆದವರನ್ನು ಬಿಟ್ಟು ಕಳುಹಿಸಿದ್ದಾರೆ ತಿಳಿಸಿದೆ.
ಬಳಿಕ ಸಂಘಪರಿವಾರದಿಂದ ಒತ್ತಡ ಹೆಚ್ಚಾದಾಗ ಇಳಕಲ್ ಟೌನ್ ಪೊಲೀಸರು ಸ್ಥಳೀಯ ನಿವಾಸಿ ಮುಹಮ್ಮದ್ ರಫೀಕ್ ಐವಳ್ಳಿ, ಅಲ್ತಾಫ್ ಹುಸೇನ್ ಕರಡಿ, ಮುಹಮ್ಮದ್ ಯೂಸುಫ್ ಭಾಗವಾನ್ ಸೇರಿದಂತೆ ನಾಲ್ವರು ಅಮಾಯಕರನ್ನು ಜ.25ರಂದು ರಾತ್ರಿ ಮನೆಗೆ ನುಗ್ಗಿ ಪೊಲೀಸರು ಠಾಣೆಗೆ ಎಳೆದೊಯ್ದಿದ್ದಾರೆ. ವಿಚಾರಣೆ ನಡೆಸಿ ಬಿಡುವುದಾಗಿ ಹೇಳಿದ್ದ ಪೊಲೀಸರು ಜ.27ರವರೆಗೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ. ಕುಟುಂಬದ ಸದಸ್ಯರ ಭೇಟಿಗೂ ಅವಕಾಶ ನಿರಾಕರಿಸಿದ ಪೊಲೀಸರು ಊಟ, ತಿಂಡಿ ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದವರಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಸಂಘಪರಿವಾರದ ಒತ್ತಡಕ್ಕೆ ಮಣಿದು ಪೊಲೀಸರು ಈ ಕಾನೂನುಬಾಹಿರ ಕೃತ್ಯವೆಸಗಿದ್ದಾರೆ. ಕೊನೆಗೆ ಈ ನಾಲ್ವರ ವಿರುದ್ಧವೂ ಸುಳ್ಳು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.
ಕಾನೂನು ಪ್ರಕಾರ ನಡೆದುಕೊಳ್ಳಬೇಕಾದ ಪೊಲೀಸರು ಕಾನೂನನ್ನು ಗಾಳಿಗೆ ತೂರಿ ಮೂರು ದಿನಗಳ ಕಾಲ ಅಮಾಯಕರನ್ನು ಠಾಣೆಯಲ್ಲಿ ಕೂರಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ತಪ್ಪಿತಸ್ಥ ಇಳಕಲ್ ಟೌನ್ ಪೊಲೀಸರನ್ನು ಅಮಾನತುಗೊಳಿಸಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸುಳ್ಳು ಪ್ರಕರಣದಡಿ ಬಂಧಿಸಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇನ್ನು ಮುಂದೆ ಇಳಕಲ್ ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.







