ಉಡುಪಿ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಸಮಗ್ರ ನಿರ್ವಹಣೆಗೆ ಸಭೆ
![ಉಡುಪಿ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಸಮಗ್ರ ನಿರ್ವಹಣೆಗೆ ಸಭೆ ಉಡುಪಿ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಸಮಗ್ರ ನಿರ್ವಹಣೆಗೆ ಸಭೆ](https://www.varthabharati.in/sites/default/files/images/articles/2022/01/31/323379-1643635304.jpg)
ಉಡುಪಿ, ಜ.31:ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕಗಳ ಸಮಗ್ರ ನಿರ್ವಹಣೆಯ ಕುರಿತಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯಲ್ಲಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಸಮಾಲೋಚನಾ ಸಭೆ ನಡೆಯಿತು.
ಸರಕಾರಿ ಡಯಾಲಿಸಿಸ್ ಘಟಕವನ್ನು ಈ ಹಿಂದೆ ಬಿ.ಆರ್.ಶೆಟ್ಟಿ ಆಸ್ಪತ್ರೆಯ ವರು ನಿರ್ವಹಿಸುತಿದ್ದರು. ಆದರೆ ಅಲ್ಲೀಗ ಆರ್ಥಿಕ ಹಾಗೂ ಇತರ ಸಮಸ್ಯೆಗಳು ಎದುರಾದ ಕಾರಣ, ಮತ್ತೆ ಜಿಲ್ಲಾಸ್ಪತ್ರೆಗೆ ನಿರ್ವಹಣೆಯನ್ನು ವಹಿಸಲಾಗಿತ್ತು.
ಪ್ರಸ್ತುತ ಡಯಾಲಿಸಿಸ್ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಸಂಜೀವಿನ ಏಜೆನ್ಸಿಗೆ ವಹಿಸಲಾಗಿದ್ದು, ಈ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಿ ಏಜೆನ್ಸಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ 13 ವರ್ಷಗಳ ಅನುಭವ ಉಳ್ಳ ಡಯಾಲಿಸಿಸ್ ತಂತ್ರಜ್ಞ ರೊಬ್ಬರನ್ನು ಶೀಘ್ರವೇ ನೇಮಿಸಿಕೊಳ್ಳಲು ಹಾಗೂ ಈಗ ಪ್ರತಿದಿನ ನಡೆಯುತ್ತಿರುವ 30 ಡಯಾಲಿಸಿಸ್ಗಳನ್ನು ಫೆ.10ರ ನಂತರ ಪ್ರತಿದಿನ 40 ಡಯಾಲಿಸಿಸ್ಗಳಿಗೆ ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬಳಿಕ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸೌಲಭ್ಯ, ಸಲಕರಣೆಗಳನ್ನು, ಸ್ಥಿತಿಗತಿಗಳನ್ನು ಅವಲೋಕಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗ ಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಸಂಜೀವಿನಿ ಏಜೆನ್ಸಿಯ ರವೀಂದ್ರನಾಥ್ ಚಕ್ರವರ್ತಿ, ಅಭಿಜಿತ್ ಹಾಗೂ ಇತರರು ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2022/01/31/UD-J31 GOVT HOSPITAL1.jpg)