ಎಸ್.ಆರ್.ಪಾಟೀಲ್- ಸಿ.ಎಂ.ಇಬ್ರಾಹೀಂ ಭೇಟಿ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು, ಜ.31: ವಿಧಾನಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹಾಗೂ ಸಿ.ಎಂ.ಇಬ್ರಾಹೀಂ ನಿನ್ನೆ ಹುಬ್ಬಳ್ಳಿಯಲ್ಲಿ ಸೌಜನ್ಯದ ಭೇಟಿಯಾಗಿದ್ದಾರೆ. ಇದನ್ನು ರಾಜಕೀಯವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಆರ್.ಪಾಟೀಲ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ದಡ್ಡರಲ್ಲ. ಅವರು ಅಧಿಕಾರದ ಆಮಿಷಕ್ಕೆ ಒಳಗಾಗಿ ಯಾವುದೆ ಚರ್ಚೆಗಳನ್ನು ಮಾಡುವುದಿಲ್ಲ ಎಂದರು.
ಇದನ್ನೂ ಓದಿ: ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಡಿ.ಕೆ ಶಿವಕುಮಾರ್- ಸಚಿವ ಆನಂದ್ ಸಿಂಗ್ ಭೇಟಿ
ಇಬ್ರಾಹೀಂ ಹಿರಿಯ ನಾಯಕರು, ಇನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಅವರಿಬ್ಬರೂ ಪರಸ್ಪರ ಮಾತನಾಡುವುದರಲ್ಲಿ ತಪ್ಪಿಲ್ಲ. ಅವರಿಬ್ಬರ ಭೇಟಿಯನ್ನು ರಾಜಕೀಯವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.
ಕೋವಿಡ್ ಹೆಸರಲ್ಲಿ ತೊಂದರೆ ನೀಡುವುದು ನಿಲ್ಲಿಸಲಿ: ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭ ಮಾಡುವುದು ಯಾವಾಗ ಎಂಬ ಪ್ರಶ್ನೆಗೆ, ‘ಮೊದಲು ಕೋವಿಡ್ ಹೆಸರಲ್ಲಿ ಚಿತ್ರರಂಗದವರಿಗೆ, ಕ್ರೀಡಾ ಕ್ಷೇತ್ರದವರಿಗೆ ನೀಡುತ್ತಿರುವ ತೊಂದರೆಯನ್ನು ನಿಲ್ಲಿಸಲಿ. ಕೇವಲ ರಾಜಕಾರಣವನ್ನು ಮನಸಿನಲ್ಲಿಟ್ಟುಕೊಂಡು ನಿರ್ಬಂಧ ಹಾಕುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ಸರಕಾರದವರು ಎಷ್ಟು ದಿನ ತಡ ಮಾಡುತ್ತಾರೋ ಅಷ್ಟು ದಿನ ತಡೆಯಬಹುದು. ಅವರು ನಿರ್ಬಂಧ ತೆರವು ಮಾಡಲೇಬೇಕಲ್ಲವೇ? ಚುನಾವಣೆ ನಡೆಸಲೇಬೇಕಲ್ಲವೇ? ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳ ಚುನಾವಣೆಗಳಲ್ಲಿ ಯಾವ ರೀತಿ ನಿರ್ಬಂಧ ಹಾಕುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಚಿತ್ರರಂಗದವರು ಸರಕಾರ ಅವರ ಪರವಾಗಿ ನಿಲ್ಲಲಿದೆ ಎಂದು ಈಗಲೂ ಕಾಯುತ್ತಿದ್ದಾರೆ. ಸರಕಾರ ಕೋವಿಡ್ ಮಾರ್ಗಸೂಚಿಗಳನ್ನು ಮುಂದುವರಿಸಲಿ, ಬೇಡ ಎನ್ನುವುದಿಲ್ಲ. ಆದರೆ ನಿರ್ಬಂಧಗಳನ್ನು ತೆಗೆದು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಅವರು ಆಗ್ರಹಿಸಿದರು.
ಕೇಂದ್ರ ಬಜೆಟ್ ಮೇಲೆ ನಿರೀಕ್ಷೆ: ನಾಳೆ ಕೇಂದ್ರ ಸರಕಾರ ಬಜೆಟ್ ಮಂಡನೆ ಮಾಡಲಿದ್ದು, ಕೋವಿಡ್ನಿಂದ ನರಳಿರುವ ಜನರಿಗೆ ಸರಕಾರ ಯಾವ ರೀತಿ ಸಹಾಯ ಮಾಡಲಿದೆ ಎಂದು ನೋಡಬೇಕು. ನಮ್ಮ ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಜನ ಕೋವಿಡ್ನಿಂದ ಸತ್ತಿದ್ದು, ಅದರಲ್ಲಿ ಕೆಲವರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ ಎಂದು ಶಿವಕುಮಾರ್ ಟೀಕಿಸಿದರು.
ಸರಕಾರ ಈ ಹಿಂದೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ನ್ಯಾಯಾಲಯ ಕೂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕೋವಿಡ್ನಿಂದ ಸತ್ತವರಿಗೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಿದ್ದು, ಸತ್ತವರ ಕುಟುಂಬಕ್ಕೆ 4 ಲಕ್ಷ ರೂ.ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆ ಸೇರಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವವರಿಗೆ ಪರಿಹಾರ ಕೊಡಬೇಕು. ರೈತರಿಗೆ, ಕಾರ್ಮಿಕರಿಗೆ ಆಗಿರುವ ನಷ್ಟ ಭರಿಸಬೇಕು. ವೃತ್ತಿ ಕಳೆದುಕೊಂಡವರಿಗೆ ಸರಕಾರ ಈ ಬಜೆಟ್ನಲ್ಲಿ ಹಣ ಒದಗಿಸುವ ನಿರೀಕ್ಷೆ ನಮ್ಮದಾಗಿದೆ ಎಂದು ಅವರು ತಿಳಿಸಿದರು.
ಗೋವಾದಲ್ಲಿ ಕಾಂಗ್ರೆಸ್ ಸರಕಾರ ಖಚಿತ: ಗೋವಾ ಚುನಾವಣೆ ಪ್ರಚಾರಕ್ಕೆ ತೆರಳಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಗೋವಾ ಪ್ರಚಾರಕ್ಕೆ ಹೋಗಿದ್ದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಗೋವಾ ಜನ ಸಂಕಲ್ಪ ಮಾಡಿದ್ದಾರೆ. ಅವರಿಗೆ 10 ವರ್ಷಗಳ ಕಾಲ ಅಧಿಕಾರ ನೀಡಿದ್ದರು. ಕಳೆದಬಾರಿ ಆಪರೇಷನ್ ಕಮಲದಿಂದ ಅಲ್ಲಿ ಬಿಜೆಪಿ ಸರಕಾರ ಮಾಡಿತ್ತು. ಈ ವರ್ಷ ಹಾಲಿ ಶಾಸಕರೇ ಬಿಜೆಪಿ ತೊರೆದಿದ್ದು, ಈ ಬಾರಿ ಕಾಂಗ್ರೆಸ್ ಸ್ವಂತ ಬಲದಿಂದ ಸರಕಾರ ರಚನೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪೆಗಾಸಸ್ ಕದ್ದಾಲಿಕೆ ಮಾಡಿದ್ದಕ್ಕೆ ಕ್ಷಮೆ ಕೇಳಲಿ: ಪೆಗಾಸಸ್ ಕದ್ದಾಲಿಕೆ ಪ್ರಕರಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸರಕಾರ ಭದ್ರತೆ ಹೆಸರಲ್ಲಿ ಈ ರೀತಿ ಕದ್ದಾಲಿಕೆ ಯಾಕೆ ಮಾಡುತ್ತಿದೆಯೋ ಗೊತ್ತಿಲ್ಲ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಇತರರು ಪಕ್ಷದ ನಿಲುವು ಪ್ರಕಟಿಸಿದ್ದು, ನಾನು ಅದಕ್ಕೆ ಬದ್ಧನಾಗಿದ್ದೇನೆ. ಈ ವಿಚಾರದಲ್ಲಿ ಸರಕಾರ ಸತ್ಯಾಂಶ ಒಪ್ಪಿಕೊಂಡು ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.







