ಸಿದ್ಧಮೂಲೆ ದಲಿತ ಕಾಲನಿಗೆ ಕುಡಿಯುವ ನೀರು, ಶೌಚಾಲಯ ನಿಮಾಣಕ್ಕೆ ಆಗ್ರಹ
ದಲಿತ್ ಸೇವಾ ಸಮಿತಿಯಿಂದ ಕೊಳ್ತಿಗೆ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ

ಪುತ್ತೂರು : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಸಿದ್ದಮೂಲೆ-ಕೆಮ್ಮಾರ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಪರಿಶಿಷ್ಟ ಜಾತಿಯ 6 ಕುಟುಂಬಗಳಿಗೆ ಕುಡಿಯಲು ನಳ್ಳಿ ನೀರಿನ ಸಂಪರ್ಕ ಹಾಗೂ ಬಯಲು ಶೌಚ ತಡೆಯಲು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಕೊಳ್ತಿಗೆ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು, ಸಿದ್ಧಮೂಲೆ ಮತ್ತು ಕೆಮ್ಮಾರದ ಆರು ಕುಟುಂಬಗಳು ರಸ್ತೆ ಬದಿಯ ಕೆರೆಯ ಕೊಳಕು ನೀರನ್ನು ಕುಡಿದು ಬದುಕುತ್ತಿದ್ದು, ಪಂಚಾಯತ್ನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ತಮ್ಮ ಕ್ಷೇತ್ರಕ್ಕೆ ಕೋಟಿ-ಕೋಟಿ ಅನುದಾನ ತರಿಸಿರುವುದಾಗಿ ಹೇಳಿಕೊಂಡು ಬ್ಯಾನರ್ ಹಾಕಿಸಿಕೊಂಡಿರುವ ಇಲ್ಲಿನ ಜನಪ್ರತಿನಿಧಿಗಳು ಈ ಕಾಲೊನಿಯ ಜನರು ಮೂಲಭೂತ ಅವಶ್ಯಕತೆಯಿಂದ ವಂಚಿತರಾಗಿದ್ದರೂ ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ರಸ್ತೆ ವಿಚಾರದಲ್ಲಿ ನಮ್ಮ ಹಕ್ಕಿಗೋಸ್ಕರ ಹೋರಾಡಲು ತಯಾರಾಗಿಯೇ ಬಂದಿದ್ದೇವೆ. ನೀರಿನ ವ್ಯವಸ್ಥೆಯ ವಿಚಾರದಲ್ಲಿ ಕೇವಲ ಅನುದಾನ ಇಟ್ಟರೆ ಸಾಲದು, ಯಾವಾಗ ಕಾಮಗಾರಿ ಆರಂಭಿಸುತ್ತೀರಿ ಎಂದು ಲಿಖಿತ ಭರವಸೆ ನೀಡಬೇಕು.ಇಲ್ಲದಿದ್ದರೆ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಅವರು, ಸಿದ್ಧಮೂಲೆಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಿ ಕೊಡುತ್ತೇವೆ. ಅದಕ್ಕಾಗಿಯೇ ಜಲಜೀವನ್ ಮಿಷನ್ ಯೋಜನೆಯಡಿ ರೂ. 7ಲಕ್ಷದ ಅಂದಾಜುಪಟ್ಟಿ ತರಾರಿಸ ಲಾಗಿದ್ದು, ಯೋಜನೆ ಅನುಷ್ಠಾನಕ್ಕೆ 1 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದರು. ಆದರೆ ಪ್ರತಿಭಟನಾ ಕಾರರು ಈ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯ ಈ ನಿರ್ಧಾರವನ್ನು ಲಿಖಿತವಾಗಿ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಯನ್ನು ಹಿಂತೆಗೆದುಕೊಂಡರು.
ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ್, ಕುಶಾಲಪ್ಪ ಮೂಡಂಬೈಲು, ಸೋಮಪ್ಪ ನಾಯ್ಕ ಮಲ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ಸಂಘಟನೆಯ ಪ್ರಮುಖರಾದ ಧನಂಜಯ ನಾಯ್ಕ ಬಲ್ನಾಡು, ಚಂದ್ರ ಇದ್ಪಾಡಿ, ಸಂಜೀವ ಹೆಗ್ಡೆಕ್ಕೋಡಿ, ಲಲಿತಾ ನಾಯ್ಕ, ಸುನಂದಾ ತೆಂಕಿಲ, ಲಲಿತಾ ವಾಲ್ತಾಜೆ, ಕೆ.ರಮೇಶ್ ಕಡಂಬು, ರಾಮಣ್ಣ ಪಿಲಿಂಜೆ, ಗುರುವಪ್ಪ ಎನ್,ಕೆ.ನಾರಾಯಣ ಕೆಮ್ಮತಕಾನ ,ಮಹಾಲಿಂಗ ಪೆಲತೋಡಿ, ಸ್ಥಳೀಯರಾದ ಸೀನ,ಲವ, ಬಬಿತಾ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.







