ಎ.ಎಸ್. ಮಾಣಿಪ್ಪಾಡಿ ನಿಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸಂತಾಪ

ಎ.ಎಸ್. ಮಾಣಿಪ್ಪಾಡಿ
ಮಂಗಳೂರು, ಜ.31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ಗಡಿನಾಡು ಪ್ರದೇಶದಲ್ಲಿ ಗೌರವಾನ್ವಿತ ಹೆಸರನ್ನು ಹೊಂದಿರುವ ಸುಶಿಕ್ಷಿತ, ಪ್ರತಿಷ್ಠಿತ ಮಾಣಿಪ್ಪಾಡಿ ಮನೆತನದ ಹಿರಿಯ ಸದಸ್ಯರಾಗಿರುವ, ಎ.ಎಸ್. ಮಾಣಿಪ್ಪಾಡಿ ಎಂದೇ ಅರಿಯಲ್ಪಡುವ ಅಬ್ದುಲ್ ಷಾ ಮಾಣಿಪ್ಪಾಡಿ (88) ನಿಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಮಾತನಾಡಿ, ಎ.ಎಸ್. ಮಾಣಿಪ್ಪಾಡಿಯವರು, ಸಾಮಾಜಿಕ, ಧಾರ್ಮಿಕ, ರಾಜಕೀಯ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ಮುತ್ಸದ್ದಿಯಾಗಿದ್ದರು. ಉತ್ತಮ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಅವರು, ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕನ್ಯಾನ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು ಮತ್ತು ಮಸ್ಜಿದುಲ್ ಜಲಾಲಿಯ ಬೈರಿಕಟ್ಟೆ ಇದರ ಅಧ್ಯಕ್ಷರಾಗಿಯೂ, ಗೌರವಾಧ್ಯಕ್ಷ ಹುದ್ದೆಯಲ್ಲಿದ್ದೂ ಸೇವೆ ಸಲ್ಲಿಸಿದವರು ಮಾತ್ರವಲ್ಲದೆ, ಒಬ್ಬ ಉತ್ತಮ ಕೃಷಿಕನೆಂಬ ಹೆಗ್ಗಳಿಕೆಯನ್ನು ಕೂಡಾ ಗಳಿಸಿದ್ದು ಪರಿಸರದಲ್ಲಿ ತನ್ನದೇ ಆದ ಘನತೆ, ಗಾಂಭೀರ್ಯ ಗೌರವವನ್ನು ಹೊಂದಿದ್ದರು.
ಇವರ ಸರಳ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅಲ್ಲದೆ ವೈಯುಕ್ತಿಕವಾಗಿ ನನಗೆ ಹಿರಿಯ ಮಾರ್ಗದರ್ಶಕರಂತಿದ್ದ ಇವರು ಬಹಳ ಆತ್ಮೀಯತೆಯನ್ನೂ ಹೊಂದಿದವರಾಗಿದ್ದರಲ್ಲದೆ, ಭಾರತೀಯ ಸೇನೆಯಲ್ಲಿಯೂ, ಸೇವೆ ಸಲ್ಲಿಸಿದ್ದ ಇವರನ್ನು ಸ್ಥಳೀಯರು ನಿವೃತ್ತ ಸೇನಾಧಿಕಾರಿ ಎಂದೇ ಹೇಳುತ್ತಿದ್ದರು. ಇವರ ಅಗಲಿಕೆಯು ಒಟ್ಟು ಸಮಾಜಕ್ಕೆ ಸಂಭವಿಸಿದ ನಷ್ಟವಾಗಿದ್ದು, ಸೃಷ್ಟಿಕರ್ತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ಮಕ್ಕಳಿಗೆ ಸಹನೆಯನ್ನು ಅನುಗ್ರಹಿಸಲಿ ಎಂದು ಹೇಳಿದರು.