ರಸ್ತೆಗಳನ್ನು ಅಗೆದಿರುವುದ್ನು ನೋಡಿದರೆ ಹೊಟ್ಟೆ ಉರಿಯುತ್ತೆ: ಮಂಗಳೂರಿನಲ್ಲಿ ಸಚಿವ ಭೈರತಿ ಅಸಮಾಧಾನ

ಮಂಗಳೂರು, ಫೆ.1: ನಗರದ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದನ್ನು ನೋಡಿದಾಗ ಹೊಟ್ಟೆ ಉರಿಯುತ್ತೇರಿ. ಅಲ್ಲಲ್ಲಿ ರಸ್ತೆಯುದ್ದಕ್ಕೂ ಕಟ್ಟಡ ತ್ಯಾಜ್ಯ, ಸ್ವಚ್ಛತೆ ಇಲ್ಲ. ಗುತ್ತಿಗೆ ಪಡೆದವರು ಕೆಲಸ ನಿರ್ವಹಿಸುತ್ತಿಲ್ಲ ಅಂದ್ರೆ ಅವರ ಗುತ್ತಿಗೆ ರದ್ದುಪಡಿಸಿ ಕ್ರಿಮಿನಲ್ ಕೇಸ್ ಬುಕ್ ಮಾಡಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಇಂದು ಪಾಲಿಕೆ, ಮಂಗಳೂರು ಸ್ಮಾರ್ಟ್ ಸಿಟಿ ಹಾಗೂ ಮೂಡಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ನಗರದಲ್ಲಿ ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಯೋಜನೆಗಳಡಿ ರಸ್ತೆಗಳನ್ನು ಅಲ್ಲಲ್ಲಿ ಅಗೆದು ಬಿಟ್ಟಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಗೆದಿರುವ ರಸ್ತೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ಮುಚ್ಚಿಸುವ, ರಸ್ತೆ ಬದಿಗಳಲ್ಲೇ ಸುರಿದಿರುವ ಕಟ್ಟಡ ತ್ಯಾಜ್ಯವನ್ನು ಪ್ರತಿ ವಾರ ಸ್ಥಳ ಭೇಟಿ ಅಭಿಯಾನ ರೀತಿಯಲ್ಲಿ ಪರಿಶೀಲನೆ ಮಾಡಿ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಪೌರ ಕಾರ್ಮಿಕರ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಮುಂದಿನ ತಿಂಗಳು ಮತ್ತೆ ಭೇಟಿ ನೀಡುವ ಸಂದರ್ಭ ಪ್ರಗತಿ ಕಂಡು ಬಾರದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
24x7 ಕುಡಿಯುವ ನೀರಿನ ಕಾಮಗಾರಿ ಪೂರ್ಣ ಯಾವಾಗ ?
ನಗರಕ್ಕೆ 24x7 ಕುಡಿಯುವ ನೀರಿನ ಪೂರೈಕೆಯ ಕಾಮಗಾರಿಗಳ ಪರಿಶೀಲನೆ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳ ಉತ್ತರದಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಭೈರತಿ ಬಸವರಾಜ್, ಕಾಮಗಾರಿ ಸರಿಯಾಗಿ ಆಗುತ್ತಿಲ್ಲ ಎಂಬ ಬಗ್ಗೆ ತನಗೂ ತುಂಬಾ ದೂರುಗಳು ಬಂದಿರುವುದಾಗಿ ಹೇಳಿದರು.
ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ 1385 ಕಿ.ಮೀ. ಪೈಪ್ಲೈನ್ ಅಳವಡಿಕೆಯಲ್ಲಿ 250 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದಾಗ, ಉಳಿದ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.
ಪ್ರತಿ ತಿಂಗಳು 50 ಕಿ.ಮೀ.ನಂತೆ ಪೈಪ್ಲೈನ್ ಅಳವಡಿಕೆ ಗುರಿ ಹೊಂದಲಾಗಿದೆ. 19 ಓವರ್ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ 13 ಟ್ಯಾಂಕ್ಗಳ ನಿರ್ಮಾಣ ನಡೆಯುತ್ತಿದ್ದು, 4 ಟ್ಯಾಂಕ್ಗಳ ಸ್ಥಳವಿನ್ನೂ ಅಂತಿಮಗೊಂಡಿಲ್ಲ ಎಂದು ಅಧಿಕಾರಿ ಉತ್ತರಿಸಿದರು.
ಟ್ಯಾಂಕ್ ನಿರ್ಮಾಣಕ್ಕೆ ಸ್ಥಳವೇ ಅಂತಿಮಗೊಳ್ಳದೆ 2023ರ ನವೆಂಬರ್ಗೆ ಸಂಪೂರ್ಣ ಕಾಮಗಾರಿ ಮುಗಿಸಲು ಸಾಧ್ಯವೇ? ಟ್ಯಾಂಕ್ಗಳನ್ನು ಎತ್ತಿ ನಿಲ್ಲಿಸುವುದೇ ಎಂದು ಸಚಿವರು ಅಧಿಕಾರಿಗಳನ್ನು ಗದರಿದರು.
ಕಾಲಹರಣ ಮಾಡಿ ಕತೆ ಹೇಳುವುದು ಬೇಡ. ಕಾಮಗಾರಿ ಸಂಪೂರ್ಣ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ತಿಂಗಳೊಳಗೆ ಪ್ರಗತಿಯನ್ನು ತೋರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಟಿಡಿಆರ್ ನೀಡಲು ಒತ್ತು ನೀಡಿ
ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ಟಿಡಿಆರ್ ನೀಡುವಲ್ಲಿ ವಿಳಂಬವಾಗುತ್ತಿದೆ. ಕಳೆದ ಸುಮಾರು 12 ವರ್ಷಗಳಿಂದ ಟಿಡಿಆರ್ ನೀಡದೆ ಬಾಕಿಯಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಸಭೆಯ ಗಮನಕ್ಕೆ ತಂದರು.
ಹಿಂದಿನವರಿಗೇ ಟಿಡಿಆರ್ ಕೊಟ್ಟಿಲ್ಲ ಎಂದರೆ ಯಾರು ಜಾಗ ಬಿಟ್ಟು ಕೊಡುತ್ತಾರೆ. ಹಾಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಜಾಗ ಬಿಟ್ಟು ಕೊಟ್ಟವರಿಗೆ ಟಿಡಿಆರ್ ನೀಡುವ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಕರ ಸಂಗ್ರಹದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಬೈರತಿ, ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪಡೆದವರು ಕಾಮಗಾರಿ ನಿಲ್ಲಿಸಿದ್ದಲ್ಲಿ ಅವರ ಗುತ್ತಿಗೆ ರದ್ದುಪಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮನಪಾ ಸದಸ್ಯೆ ಶಕಿಲಾ ಕಾವಾ ಅವರು ಭಾಗವಹಿಸಿ ಸದಸ್ಯರ ಗೌರವ ಧನವನ್ನು 15,000 ರೂ.ಗಳಿಗೆ ಏರಿಕೆ ಮಾಡುವಂತೆ ಬೇಡಿಕೆ ಇಟ್ಟರು. ನಗರಕ್ಕೆ ಸಮರ್ಪಕ ನೀರು ಪೂರೈಕೆ ಕಾಮಗಾರಿಗಾಗಿ 250 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ನೀಡುವಂತೆ ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಆಗ್ರಹಿಸಿದರು. ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿವರ ನೀಡಿದರು.
ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಳ, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಶಾಸಕ ಉಮಾನಾಥ ಕೋಟ್ಯಾನ್, ಸ್ಮಾರ್ಟ್ ಸಿಟಿ ಅಧಿಕಾರಿ ಪ್ರಶಾಂತ್, ಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ ಉದ್ದೇಶ ಹಳಿ ತಪ್ಪಿದೆ ಎಂದ ಮಂಜುನಾಥ ಭಂಡಾರಿ
ಮಂಗಳೂರು ಸ್ಮಾರ್ಟ್ ಸಿಟಿ ಉದ್ದೇಶ ಇಲ್ಲಿನ ಜಲಾಭಿಮುಖ ಅಭಿವೃದ್ದಿಯೊಂದಿಗೆ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಪ್ರವಾಸೋದ್ಯಮ ಹಬ್ ಆಗಿ ಮಾಡುವುದಾಗಿದ್ದರೂ ಕೇವಲ ರಸ್ತೆ ಅಭಿವೃದ್ಧಿ ಕಾಮಗಾರಿ ಮಾತ್ರ ಆಗುತ್ತಿದೆ. ಹಾಗಾಗಿ ಸ್ಮಾರ್ಟ್ ಸಮಿಟಿ ಉದ್ದೇಶ ಹಳಿ ತಪ್ಪಿದೆ ಎಂದು ವಿಧಾನ ಪರಿಷತ್ನ ಸದಸ್ಯ ಮಂಜುನಾಥ ಭಂಡಾರಿ ಆಕ್ಷೇಪಿಸಿದರು.
ತಾಂತ್ರಿಕ ಹಾಗೂ ಇತರ ಸಮಸ್ಯೆಗಳಿಂದ ಜಲಾಭಿಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸ್ವಲ್ಪ ವಿಳಂಬವಾಗಿದೆಯೇ ಹೊರತು ಉದ್ದೇಶ ಹಳಿ ತಪ್ಪಿಲ್ಲ ಎಂದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟನೆ ನೀಡಿದರು.