ದೇಶದ ಆರ್ಥಿಕತೆಗೆ `ಬೂಸ್ಟರ್ ಡೋಸ್' ನೀಡುವ ಬಜೆಟ್: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು, ಫೆ. 1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಮ್ಮ ದೇಶದ ಆರ್ಥಿಕತೆಗೆ ಬೂಸ್ಟರ್ ನೀಡುವ ಡೋಸ್ ಆಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವಂತೆ ಪ್ರಧಾನಿ ಮೋದಿ ಅವರ ದೂರದರ್ಶಿತ್ವದಲ್ಲಿ ನಾವುಗಳು ಅಭಿವೃದ್ದಿಯ ಅಮೃತ ಕಾಲಕ್ಕೆ ಸಾಕ್ಷಿಯಾಗಿದ್ದೇವೆ. ಮುಂದಿನ 25 ವರ್ಷಗಳ ಅಭಿವೃದ್ಧಿಯ ನೀಲಿನಕ್ಷೆಯನ್ನು ವಿತ್ತ ಸಚಿವರು ನೀಡಿದ್ದಾರೆ. ಹೆದ್ದಾರಿ ಜಾಲವನ್ನ 25 ಸಾವಿರ ಕಿಲೋಮೀಟರ್ಗಳಷ್ಟು ವಿಸ್ತರಿಸುವುದು, ದೇಶದ 5 ನದಿಗಳನ್ನು ಜೋಡಿಸುವ ವಿಸ್ತೃತ ಯೋಜನೆಯನ್ನು ಅಂತಿಮಗೊಳಿಸಿರುವುದು, ನೈಸರ್ಗಿಕ ಕೃಷಿಗೆ ಒತ್ತು ನೀಡುವಂತಹ ಮಹತ್ವದ ಅಂಶಗಳನ್ನು ಆಯವ್ಯಯದಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಹಾಗೆಯೇ, ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ, ತರಗತಿಗೊಂದು ಟಿವಿ ಚಾನಲ್ನ ಪ್ರಸ್ತಾವನೆ, ಪ್ರಾದೇಶಿಕ ಭಾಷೆಗಳೂ ಸೇರಿ 200 ಹೊಸ ಚಾನಲ್ ಆರಂಭಕ್ಕೆ ಪ್ರಸ್ತಾಪ, ಶಿಕ್ಷಕರುಗಳಿಗೆ ಡಿಜಿಟಲ್ ಟೂಲ್ಸ್ಗಳ ನೀಡುವಿಕೆ ಹೀಗೆ ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೂ ಒತ್ತು ನೀಡಲಾಗಿದೆ. 2 ಲಕ್ಷ ಅಂಗನವಾಡಿಗಳ ಉನ್ನತೀಕರಣದಿಂದ ನಮ್ಮ ದೇಶದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಒತ್ತು. ಮಹಿಳಾ ಮತ್ತು ಮಕ್ಕಳ ಅಭ್ಯುದಯಕ್ಕೂ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಭಾರತ ದೇಶವನ್ನು ತಾಂತ್ರಿಕವಾಗಿ ಮತ್ತಷ್ಟು ಮೇಲ್ದರ್ಜೆಗೇರಿಸುವ ಮೂಲಕ ಎಲ್ಲ ವರ್ಗದ ಅಭ್ಯುದಯಕ್ಕೆ ಆದ್ಯತೆ ನೀಡಿರುವ ಬಜೆಟ್ ಇದಾಗಿದೆ ಎಂದು ಸಚಿವ ಶಶಿಕಲಾ ಜೊಲ್ಲೆ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.