ಉಡುಪಿ: ಪ್ರವೇಶ ನಿರ್ಬಂಧ ನಿರ್ಣಯದ ಬಳಿಕವೂ ಶಿರವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರು
ನಮ್ಮದು ಸರಕಾರಿ ಕಾಲೇಜು, ಬರಬೇಡಿ ಎನ್ನಲು ಶಾಸಕರಿಗೆ ಹಕ್ಕಿಲ್ಲ ಎಂದ ವಿದ್ಯಾರ್ಥಿನಿಯರು

ಉಡುಪಿ, ಫೆ.1: ಪ್ರವೇಶ ನಿರ್ಬಂಧ ನಿರ್ಣಯದ ಬಳಿಕವೂ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಇಂದು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದ್ದಾರೆ. ಆದರೆ ಹಿಜಾಬ್ ಧರಿಸಿದ ಕಾರಣಕ್ಕಾಗಿ ಇವರಿಗೆ ಕಾಲೇಜಿನೊಳಗೆ ಪ್ರವೇಶ ನಿರಾಕರಿಸಲಾಗಿತ್ತು.
ವಿದ್ಯಾರ್ಥಿನಿಯರಿಗೆ ಕೊರೋನ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಮುಚ್ಚಲಾಗಿದ್ದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸೋಮವಾರದಿಂದ ಪುನಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು ಮತ್ತು ಪೋಷಕರು ಹಾಗೂ ವಿದ್ಯಾರ್ಥಿಯರನ್ನು ಒಳಗೊಂಡ ಶಿಕ್ಷಣ ಸೇವಾ ಸಮಿತಿಯ ಸಭೆ ನಡೆಸಿ, ಹಿಜಾಬ್ ಹಾಕದೆ ತರಗತಿಗೆ ಬರಲು ಸಿದ್ಧರಿಲ್ಲದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಕಂಪೌಂಡ್ ಒಳಗೆ ಬರಲು ಅವಕಾಶ ಕಲ್ಪಿಸದಿರುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ನಿರ್ಣಯಕ್ಕೆ ಸಭೆಯಲ್ಲಿದ್ದ ಪೋಷಕರು ಹಾಗೂ ವಿದ್ಯಾರ್ಥಿನಿಯರು ಯಾವುದೇ ಒಪ್ಪಿಗೆ ಸೂಚಿಸಿರಲಿಲ್ಲ. ಆದುದರಿಂದ ಆರು ಮಂದಿ ವಿದ್ಯಾರ್ಥಿನಿಯರು ಇಂದು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದರು. ಕಾಲೇಜು ಆವರಣದೊಳಗೆ ಬಂದ ಇವರಿಗೆ ಕಾಲೇಜು ಕಟ್ಟಡದೊಳಗೆ ಪ್ರವೇಶಿಲು ಅವಕಾಶ ನೀಡದೆ ಹೊರಗೆ ನಿಲ್ಲಿಸಲಾಯಿತು.
ಅಲ್ಲದೆ ಕಾಲೇಜು ಆವರಣದಿಂದ ಹೊರಗಡೆ ಹೋಗಲು ಉಪನ್ಯಾಸಕರು ಒತ್ತಾಯ ಮಾಡಿದರೂ ವಿದ್ಯಾರ್ಥಿನಿಯರು ಹಠ ಹಿಡಿದು ಮಧ್ಯಾಹ್ನದವರೆಗೆ ಅಲ್ಲೇ ಕುಳಿತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿವಾದ ಹಿನ್ನೆಲೆಯಲ್ಲಿ ಕಾಲೇಜಿನೊಳಗೆ ಯಾರು ಕೂಡ ಪ್ರವೇಶಿಸದಂತೆ ಎಲ್ಲ ಗೇಟುಗಳಿಗೆ ಬೀಗ ಜಡಿಯಲಾಗಿತ್ತು. ಅಲ್ಲದೆ ಆವರಣದೊಳಗೆ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಒದಗಿಸಲಾಗಿತ್ತು.
'ಶಾಸಕರಿಗೆ ಅಧಿಕಾರ ಇಲ್ಲ'
‘ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಕೇಳಿದರೆ, ಹಿಜಾಬ್ ಹಾಕಿಕೊಂಡು ಬಂದರೆ ಶಿಸ್ತು ಕ್ರಮ ಜರಗಿಸಿ, ಕಂಪೌಂಡ್ನಿಂದ ಹೊರಗೆ ಹಾಕುತ್ತೇವೆ ಎಂದು ಶಾಸಕರು ಬೆದರಿಸುತ್ತಾರೆ. ಇದು ಸರಕಾರಿ ಕಾಲೇಜು. ಈ ರೀತಿ ನಮಗೆ ಹೇಳಲು ಶಾಸಕರಿಗೆ ಯಾವುದೇ ಹಕ್ಕಿಲ್ಲ’ ಎಂದು ವಿದ್ಯಾರ್ಥಿನಿ ಶಿಫಾ ತಿಳಿಸಿದರು.
ಕಾಲೇಜಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸೋಮವಾರ ನಡೆದ ಸಭೆಯಲ್ಲಿ ಇವರ ನಿರ್ಣಯಕ್ಕೆ ನಮ್ಮ ಯಾರ ಪೋಷಕರು ಕೂಡ ಒಪ್ಪಿಗೆ ಸೂಚಿಸಿಲ್ಲ. ಅವರೆಲ್ಲ ನಮಗೆ ಬೆಂಬಲ ನೀಡುತ್ತಿ ದ್ದಾರೆ. ಮಕ್ಕಳಿಗೆ ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡುವಂತೆ ನಮ್ಮ ಪೋಷಕರು ಕೂಡ ಶಾಸಕರು, ಕಾಲೇಜಿನವರಲ್ಲಿ ಮನವಿ ಮಾಡುತಿದ್ದಾರೆ. ಆದರೆ ಅವರು ಅದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದರು.
'ಎಂಟು ಮಂದಿ ಒಂದಾಗಿದ್ದೇವೆ'
‘ಈ ಹೋರಾಟದಲ್ಲಿ ನಾವು ಒಟ್ಟು ಎಂಟು ಮಂದಿ ಇದ್ದೇವೆ. ಇಬ್ಬರಿಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ಮನೆಯಲ್ಲಿ ಕ್ವಾರಂಟೈನ್ನಲ್ಲಿ ಇದ್ದಾರೆ. ಹಾಗಾಗಿ ಅವರು ಕಾಲೇಜಿಗೆ ಬರುತ್ತಿಲ್ಲ. ನಾವು ಎಂಟು ಮಂದಿ ಒಟ್ಟಿಗೆ ಇದ್ದೇವೆ’ ಎಂದು ವಿದ್ಯಾರ್ಥಿನಿಯರು ತಿಳಿಸಿದರು.
ನಮಗೆ ಶಿಕ್ಷಣ ಅತಿ ಅಗತ್ಯವಾಗಿದೆ. ಆದರೆ ಇಲ್ಲಿನ ಉಪನ್ಯಾಸರು ಅದನ್ನು ಅರ್ಥ ಮಾಡುತ್ತಿಲ್ಲ. ನಾವು ಎಷ್ಟು ಮನವಿ ಮಾಡಿದರೂ ನಮಗೆ ಅವಕಾಶವೇ ನೀಡುತ್ತಿಲ್ಲ. ಕಾಲೇಜು ಅಂದರೆ ನಮ್ಮ ಎರಡನೇ ಮನೆ. ನಾವು ಇಲ್ಲಿ ಶಿಕ್ಷಣ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬರುತ್ತಿದ್ದೇವೆ. ಆದರೆ ಅವರು ಅದನ್ನೇ ಅರ್ಥ ಮಾಡುತ್ತಿಲ್ಲ. ಸಂವಿಧಾನ ನೀಡಿರುವ ಹಕ್ಕುಗಳು ನಮಗೆ ಸಿಗುತ್ತವೆ ಎಂದು ಭಾವಿಸಿ ಸರಕಾರಿ ಕಾಲೇಜಿಗೆ ಬರುತ್ತಿದ್ದೇವೆ. ಇಲ್ಲಿಯೇ ನಮ್ಮ ಹಕ್ಕುಗಳನ್ನು ನಿರಾಕರಿಸಲ್ಪಟ್ಟರೆ ನಾವು ಮತ್ತೆ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.
ಎಲ್ಲೂ ನ್ಯಾಯ ಸಿಗದಿದಕ್ಕೆ ಹೈಕೋರ್ಟ್ ಮೊರೆ
‘ಹಿಜಾಬ್ ಹಾಕಿ ತರಗತಿಗೆ ಬರಲು ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಜಿಲ್ಲಾಧಿಕಾರಿ, ಡಿಡಿಪಿಯು, ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ನಮಗೆ ಯಾರಿಂದಲೂ ನ್ಯಾಯ ಸಿಕ್ಕಿಲ್ಲ. ಅದರ ಬದಲು ನಮಗೆ ಕಾಲೇಜಿಗೆ ಬಂದರೆ ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದರು. ಅದಕ್ಕಾಗಿ ನಾವು ನಮ್ಮ ಸಂವಿಧಾನ ನೀಡಿರುವ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದೇವೆ’ ಎಂದು ವಿದ್ಯಾರ್ಥಿನಿ ಆಲಿಯಾ ಅಸದಿ ತಿಳಿಸಿದರು.
ಹಿಜಾಹ್ ಹಾಕಿ ತರಗತಿಗೆ ಹೋಗಲು ಅನುಮತಿ ನೀಡುವಂತೆ ನಾವು ಎಲ್ಲ ವಿದ್ಯಾರ್ಥಿನಿಯರು ಹೈಕೋರ್ಟಿಗೆ ರಿಟ್ ಸಲ್ಲಿಸಿದ್ದೇವೆ. ಇದು ಸಂವಿಧಾನ ನಮಗೆ ನೀಡಿರುವ ಹಕ್ಕು. ನಾವು ಅಪರಾಧ ಮಾಡುತ್ತಿಲ್ಲ. ನಾವು ಬುರ್ಕಾ ಹಾಕಿ ಸಮವಸ್ತ್ರವನ್ನು ಮುಚ್ಚುವುದಿಲ್ಲ. ಕೇವಲ ತಲೆಗೆ ಹಿಜಾಬ್ ಹಾಕಲು ಕೇಳುತ್ತಿದ್ದೇವೆ. ನಾವು ಎಂದಿಗೂ ಕಾನೂನು ಬಾಹಿರವಾಗಿ ಹೋರಾಟ ಮಾಡುವುದಿಲ್ಲ. ಹಾಗಾಗಿ ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ವಿದ್ಯಾರ್ಥಿನಿಯರಿಂದ ಟ್ವೀಟ್
ಕಾಲೇಜಿನಲ್ಲಿ ಸೋಮವಾರ ನಡೆದ ಸಭೆಯ ನಿರ್ಣಯವನ್ನು ವಿರೋಧಿಸಿ ಆರು ವಿದ್ಯಾರ್ಥಿನಿಯರು ಸೋಮವಾರ ಸಂಜೆ ವೇಳೆ ಟ್ವೀಟ್ ಮಾಡಿದ್ದಾರೆ.
‘ಧಾರ್ಮಿಕ, ಸಂವಿಧಾನಿಕ ಹಕ್ಕು ಆಗಿರುವ ಹಿಜಾಬ್ ಧರಿಸಿಯೇ ನಾವು ಕಾಲೇಜಿಗೆ ಬರುತ್ತೇವೆ. ಅದು ನಾವು ತೆರಿಗೆ ಪಾವತಿಸುವ ಸರಕಾರಿ ಕಾಲೇಜು. ಯಾರು ಕೂಡ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ಬೆದರಿಕೆಗಳಿಂದ ನಮ್ಮ ನ್ಯಾಯಪರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಆಲಿಯಾ ಅಸದಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.