ಉಡುಪಿ : ಬಜೆಟ್ಗೆ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳು
ಆಧುನಿಕ ತಂತ್ರಜ್ಞಾನ, ಡಿಜಿಟಲೀಕರಣದತ್ತ ದಿಟ್ಟ ಹೆಜ್ಜೆ
ನಿರ್ಮಲ ಸೀತಾರಾಮನ್ ಇಂದು ಮಂಡಿಸಿದ 2022-23ನೇ ಸಾಲಿನ 39.54 ಲಕ್ಷ ಕೋಟಿ ರೂ.ಗಳ ಬಜೆಟ್ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣದತ್ತ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವರ ಮೂಲಕ ತೆಗೆದುಕೊಂಡ ದಿಟ್ಟ ನಿರ್ಧಾರವಾಗಿದೆ. ಒಂದು ದೇಶ ಒಂದು ನೋಂದಾಣಿ, ಡಿಜಿಟಲ್ ಕರೆನ್ಸಿ, ರೈತರ ರಕ್ಷಣೆ, ಶಿಕ್ಷಣಕ್ಕೆ, ಗ್ರಾಮೀಣ ಅಭಿವೃಧ್ದಿಗೆ, ನಿರುದ್ಯೋಗ ನಿರ್ಮೂಲನೆಗೆ ಒತ್ತು ಕೊಟ್ಟು ಹೊಸ ಅರ್ಥಿಕೆಯತ್ತ ಇದೊಂದು ದಿಟ್ಟ ಹೆಜ್ಜೆಯಾಗಿದೆ. -ಮಟ್ಟಾರು ರತ್ನಾಕರ ಹೆಗ್ಡೆ, ಕರಾವಳಿ ಅಭಿವೃಧಿ ಪ್ರಾಧಿಕಾರ ಅಧ್ಯಕ್ಷ.
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್
ಆತ್ಮನಿರ್ರಾರತ ನಿರ್ಮಾಣಕ್ಕೆ ಪೂರಕ ಬಜೆಟ್ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಬಜೆಟ್ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ. ರಕ್ಷಣಾ ಇಲಾಖೆಯಲ್ಲಿ ಶೇ.68 ಸ್ಥಳೀಯ ಸಾಮಾಗ್ರಿ ಖರೀದಿ, ಸಹಕಾರ ಸಂಘಗಳ ಸರ್ಚಾರ್ಜ್ ಶೇ.12ರಿಂದ ಶೇ.7ಕ್ಕೆ ಇಳಿಕೆ, ರಾಜ್ಯ ಸರಕಾರಗಳಿಗೆ 50 ವರ್ಷಗಳ ಕಾಲ ಒಂದು ಲಕ್ಷ ಕೋಟಿ ಅನುದಾನ, ಡಿಜಿಟಲೀಕರಣಕ್ಕೆ ವಿಶೇಷ ಪ್ರಾಮುಖ್ಯತೆ ಹಾಗೂ ನೇರ ತೆರಿಗೆ, ಆದಾಯ ತೆರಿಗೆಯನ್ನು ಏರಿಕೆ ಮಾಡದೇ, ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲೂ ಘೋಷಣೆಗೆ ಸೀಮಿತವಾದ ಜನಪ್ರಿಯ ಬಜೆಟ್ ಮಂಡಿಸದೇ ಆರ್ಥಿಕ ಸಬಲೀಕರಣದ ದೂರದೃಷ್ಟಿಯ ಸರ್ವ ಸ್ಪರ್ಶಿ ಜನಸಾಮಾನ್ಯರ ಬಜೆಟ್. -ಯಶ್ಪಾಲ್ ಸುವರ್ಣ, ರಾ.ಪ್ರಧಾನ ಕಾರ್ಯದರ್ಶಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ.
ಸಮೃದ್ಧ ಭಾರತದ ಪರಿಕಲ್ಪನೆಯ ಬಜೆಟ್
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ 48 ಸಾವಿರ ಕೋಟಿ ಹಣ ಮೀಸಲಿಟ್ಟು 80 ಲಕ್ಷ ಮನೆ ನಿರ್ಮಾಣ, ದೇಶದ ಪ್ರಮುಖ ಗಡಿಗಳ ಜೋಡಣೆಯ ಯೋಜನೆ ದೇಶದ ಕೃಷಿ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಆಗಲಿದೆ. ಇದರಿಂದ ಕೃಷಿಯೊಂದಿಗೆ ವಿದ್ಯುತ್ ಉತ್ಪಾದನೆ, ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಘೋಷಣೆ ಮಾಡಿರುವುದು, ಸಾವಯವ ಕೃಷಿ, ರಾಸಾಯನಿಕ ಮುಕ್ತ ಬೆಳೆಗೆ ಉತ್ತೇಜನ ದೊರೆಯಲಿದೆ. - ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ.
''ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿ ರುವ 2022ರ ಬಜೆಟ್ನಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತಂತೆ ಯಾವುದೇ ರೀತಿಯ ಕಾಳಜಿ ತೋರಲಾಗಿಲ್ಲ, ಆರೋಗ್ಯ ಕ್ಷೇತ್ರಕ್ಕೆ ಯಾವುದೇ ಮಹತ್ವ ನೀಡಲಾಗಿಲ್ಲ ಹಾಗೂ ಸಣ್ಣ ಪುಟ್ಟ ಉದ್ದಿಮೆದಾರರು ಇದುವರೆಗೂ ಜಿಎಸ್ಟಿಯಂತಹ ತೆರಿಗೆ ಪದ್ಧತಿ ಜೊತೆಗೆ ಹೆಣಗಾಡುತ್ತಿರುವುದನ್ನು ತಪ್ಪಿಸಲು ಸರಕಾರಕ್ಕಿನ್ನೂ ಸಾಧ್ಯವಾಗಿಲ್ಲ.
ಈ ಬಜೆಟ್ನಲ್ಲೂ ಹಿಂದಿನ ವರ್ಷದಂತೆ ರೈತರನ್ನು ಕಡೆಗಣಿಸಲಾಗಿದೆ. ಯಾವುದೇ ಕೊಡುಗೆಯನ್ನು ನೀಡದೆ ಮಧ್ಯಮ ವರ್ಗದವರನ್ನು ನಿರಾಶರಾಗುವಂತೆ ಮಾಡಿ, ತನ್ನ ಈ ಹಿಂದಿನ ಕಳಪೆ ಆರ್ಥಿಕ ನೀತಿಯನ್ನೇ ಕೇಂದ್ರ ಸರಕಾರ ಮುಂದುವರಿಸಿಕೊಂಡು ಹೋಗುತ್ತಿರುವುದು ಸಹ್ಯವಲ್ಲ. ಕೇವಲ ಚುನಾವಣೆ ಗೆಲ್ಲಲು ಮಾತ್ರ ನೀತಿಯನ್ನು ರೂಪಿಸುತ್ತಾ, ಪಕ್ಷದ ಪ್ರಚಾರಕ್ಕೆ ಮಾತ್ರ ಮಹತ್ವ ನೀಡುತ್ತಾ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳುತ್ತಿರುವುದು ತೀರಾ ನಿರಾಶದಾಯಕ ಮತ್ತು ಕಳವಳಕಾರಿಯಾಗಿದೆ''. -ಅಬ್ದುಲ್ ಅಝೀಝ್ ಉದ್ಯಾವರ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ.
''ನಿರ್ಮಲಾ ಸೀತಾರಾಮನ್ ಅವರ 2022ನೇ ಸಾಲಿನ ಬಜೆಟ್, ಕೇಳಲು ಕಿವಿಗೆ ಮಾತ್ರ ಖುಷಿ ಕೊಟ್ಟಿರುವ ಬಜೆಟ್. ಆದಾಯ ತೆರಿಗೆಯ ಸ್ಲಾಬ್ ನಲ್ಲಿ ಬದಲಾವಣೆ ಇಲ್ಲ, ಮದ್ಯಮ ವರ್ಗದ ಮತ್ತು ವೇತನ ವರ್ಗದ ಆಶೋತ್ತರ ಗಳನ್ನು ಈಡೇರಿಸಿಲ್ಲ, ಕೋವಿಡ್ನಲ್ಲಿ ನೊಂದವರ ಬಗ್ಗೆ ಏನೂ ಮಾಡಿಲ್ಲ. ಒಟ್ಟಿನಲ್ಲಿ ಕೇಳಲು ಖುಷಿ ಕೊಟ್ಟಿರುವ ಬಜೆಟ್''. -ಯು.ಶಬ್ಬೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಡುಪಿ.
''ನಿರ್ಮಲಾ ಸೀತಾರಾಮನ್ ಮಂಡಿಸಿರುವ ಇಂದಿನ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ 25 ವರ್ಷಗಳ ಹಿತದೃಷ್ಟಿಯನ್ನಿಟ್ಟು ಕೊಂಡು ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮುಖಾಂತರ 18 ಲಕ್ಷ ಮನೆಗಳ ನಿರ್ಮಾಣ. ಹರ್ ಘರ್, ನಲ್ ಜಲ್ ಯೋಜನೆ ಮುಖಾಂತರ 12 ಕೋಟಿ ಮನೆಗಳಿಗೆ ನಲ್ಲಿ ನೀರು ವ್ಯವಸ್ಥೆ, ಒನ್ ನೇಶನ್, ಒನ್ ರಿಜಿಸ್ಟ್ರೇಷನ್ ವ್ಯವಸ್ಥೆ, ಅಂಚೆ ಕಚೇರಿಗಳಿಗೆ ಬ್ಯಾಂಕ್ ಸ್ವರೂಪ, ಡಿಜಿಟಲೀಕರಣ ಹೀಗೆ ಎಲ್ಲಾ ವಲಯಗಳಿಗೆ ಈ ಬಾರಿಯ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ''. -ನಯನಾ ಗಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ