ಇನ್ನು ಅಸಂಘಟಿತ ಕಾರ್ಮಿಕರು, ಸ್ವಯಂ ಉದ್ಯೋಗಿಗೂ ನಿಶ್ಚಿತ ಪಿಂಚಣಿ
![ಇನ್ನು ಅಸಂಘಟಿತ ಕಾರ್ಮಿಕರು, ಸ್ವಯಂ ಉದ್ಯೋಗಿಗೂ ನಿಶ್ಚಿತ ಪಿಂಚಣಿ ಇನ್ನು ಅಸಂಘಟಿತ ಕಾರ್ಮಿಕರು, ಸ್ವಯಂ ಉದ್ಯೋಗಿಗೂ ನಿಶ್ಚಿತ ಪಿಂಚಣಿ](https://www.varthabharati.in/sites/default/files/images/articles/2022/02/2/323631-1643810314.jpg)
ಸಾಂದರ್ಭಿಕ ಚಿತ್ರ
ಉಡುಪಿ, ಫೆ.2: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಯುವ ಶಕ್ತಿಯನ್ನು ಕಳೆದು ಕೊಂಡಾಗ, ಪ್ರತಿ ತಿಂಗಳೂ ತನ್ನ ಜೀವನ ನಿರ್ವಹಣೆಗಾಗಿ ನಿಶ್ಚಿತ ಮಾಸಿಕ ಆದಾಯ ಬರುವಂತಿರಬೇಕು ಎಂಬ ಆಶಯ ಹೊಂದಿರುತ್ತಾನೆ. ಸರಕಾರಿ ನೌಕರರಿಗಾದರೆ ಸರಕಾರವೇ ಪ್ರತೀ ತಿಂಗಳೂ ನಿವೃತ್ತಿ ವೇತನ ನೀಡುತ್ತದೆ. ಆದರೆ ಯಾವುದೇ ಉದ್ಯೋಗ ಭದ್ರತೆ ಇಲ್ಲದ ಅಸಂಘಟಿತ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ತನ್ನ ದುಡಿಮೆಯ ಅವಧಿಯಲ್ಲಿ ಸಾಕಷ್ಟು ಹಣವನ್ನೂ ಕೂಡಿಡಲೂ ಆಗದೇ ಜೀವನದ ಸಂಧ್ಯಾಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇವರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುವುದನ್ನು ತಡೆಯಲು ಇವರಿಗೂ ಸಹ 60 ವರ್ಷದ ನಂತರ ಸರಕಾರದಿಂದಲೇ ಪಿಂಚಣಿ ಪಡೆಯುವ ಯೋಜನೆಯೊಂದು ಈಗ ಲಭ್ಯವಿದೆ.
ಭಾರತ ದೇಶದ ಶೇ.50ರಷ್ಟು ಆದಾಯ ಅಸಂಘಟಿತ ವಲಯದ ಅಂದಾಜು 42 ಕೋಟಿ ಕಾರ್ಮಿಕರಿಂದಲೇ ಉತ್ಪಾದನೆಯಾಗುತ್ತಿದೆ. ಅಸಂಘಟಿತ ವಲಯ ದಲ್ಲಿ ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸು ವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವವವರು ಸೇರುತ್ತಾರೆ.
ಪಿಎಂಎಸ್ವೈಎಂ ಯೋಜನೆ: ಈ ಕಾರ್ಮಿಕರಿಗೆ ಅವರ ಜೀವನದ ಸಂಧ್ಯಾ ಕಾಲದಲ್ಲಿ ದುಡಿದು ಉಣ್ಣಲು ನಿಶ್ಚಿತ ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವೃದ್ಧಾಪ್ಯದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಎಂಎಸ್ವೈಎಂ) ಎಂಬ ವಂತಿಗೆ ಆಾರಿತ ಪಿಂಚಣಿ ಯೋಜನೆ ನೆರವಾಗಲಿದೆ.
18ರಿಂದ 40 ವರ್ಷದೊಳಗಿನ, ಮಾಸಿಕ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ, ಆದಾಯ ತೆರಿಗೆ ಪಾವತಿದಾರರಾಗಿರದ ಹಾಗೂ ಇಎಸ್ಐ, ಇಪಿಎಫ್, ಎನ್ಪಿಎಸ್ ಯೋಜನೆಯ ಫಲಾನುಭವಿ ಗಳಾಗಿರದೇ ಇರುವ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಮಿಕರು ಪ್ರತೀ ತಿಂಗಳು ವಂತಿಗೆ ಪಾವತಿ ಮಾಡುವುದರ ಮೂಲಕ, 60 ವರ್ಷದ ನಂತರ ವಾರ್ಷಿಕ 36,000 ರೂ.ಪಿಂಚಣಿ ಪಡೆಯಬಹುದಾಗಿದೆ.
ಎನ್ಪಿಎಸ್-ಟ್ರೇಡರ್ಸ್: ಅಲ್ಲದೇ ವ್ಯಾಪಾರಿ, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3,000 ರೂ.ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಅವರುಗಳಿಗೆ ಆರ್ಥಿಕ ಭದ್ರತೆಯನ್ನು ನೀಡಲು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್-ಟ್ರೇಡರ್ಸ್) ಎಂಬ ವಂತಿಗೆ ಆಧಾರಿತ ಯೋಜನೆ ಕೂಡಾ ಜಾರಿಗೆ ಬಂದಿದೆ. 18-40 ವರ್ಷದೊಳಗಿನ, ವಾರ್ಷಿಕ ವಹಿವಾಟು 1.5 ಕೋಟಿ ರೂ. ಒಳಗಿರುವ, ಆದಾ ತೆರಿಗೆ ಪಾವತಿಸದ, ಇಎಸ್ಐ, ಇಪಿಎಫ್, ಎನ್ಪಿಎಸ್, ಪಿಎಂಎಸ್ವೈಎಂ, ಪಿಎಂಕೆಎಂವೈ ಯೋಜನೆಯ ಸೌಲಭ್ಯ ಪಡೆಯದೇ ಇರುವ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಯೋಜನೆಯಡಿ ಅಂಗಡಿ ಮಾಲಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಿಣಿ ಮಾಲಕರು, ಎಣ್ಣೆ ಗಿರಣಿ ಮಾಲಕರು, ವರ್ಕ್ಶಾಪ್ ಮಾಲಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೆಟ್ನ ಬ್ರೋಕರ್, ಸಣ್ಣ ಹೋಟೇಲ್ ಹಾಗೂ ರೆಸ್ಟೋರೆಂಟ್ನ ಮಾಲಕರು ಹಾಗೂ ಇಂತಹ ಇತರೆ ಸಣ್ಣ ವ್ಯಾಪಾರ ಗಳಲ್ಲಿ ತೊಡಗಿಸಿಕೊಂಡು ವ್ಯಾಪಾರಿಗಳು/ ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಈ ಯೊೀಜನೆಯ ಫಲಾನುಭವಿಗಳಾಗಬಹುದು.
ಈ ಎರಡೂ ಪಿಂಚಣಿ ಯೋಜನೆಗಳನ್ನು ಕಾಮನ್ ಸರ್ವಿಸ್ ಸೆಂಟರ್ (ಸಾಮಾನ್ಯ ಸೇವಾ ಕೇಂದ್ರ) ಗಳಲ್ಲಿ, ಆಧಾರ್ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಾಮ ನಿರ್ದೇಶಿತರ ವಿವರಗಳೊಂದಿಗೆ ಮಾಸಿಕ ವಂತಿಗೆ ಪಾವತಿಸು ವುದರ ಮೂಲಕ ನೊಂದಾಯಿಸಕೊಳ್ಳಬಹುದು. ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಿ, ನಂತರದ ತಿಂಗಳುಗಳಲ್ಲಿ ವಂತಿಕೆದಾರರ ಬ್ಯಾಂಕ್ ಖಾತೆಗಳಿಂದ ಆಟೋಡೆಬಿಟ್ ಮೂಲ ಕಟಾವು ಮಾಡಿಕೊಳ್ಳಲಾಗುತ್ತದೆ.
ಯೋಜನೆಗೆ ನೊಂದಣಿ ಹೇಗೆ: ಈ ಯೋಜನೆಗಳಿಗೆ ನೊಂದಣಿ ಮಾಡಿ ಕೊಳ್ಳಲು ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಮತ್ತು ನಾಮ ನಿರ್ದೇಶಿತರ ವಿವರಗಳೊಂದಿಗೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್ಗಳಲ್ಲಿ ನೊಂದಾವಣಿ ಮಾಡಿಕೊಳ್ಳಬಹುದು.
ಯೋಜನೆಯ ಸೌಲಭ್ಯಗಳು: ವಂತಿಕೆದಾರರು ತಿಂಗಳಿಗೆ ಪಾವತಿಸಬೇಕಾದ ವಂತಿಕೆಯನ್ನು ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿ ಪಡಿಸಲಾಗುತ್ತದೆ. ಇದು ಕನಿಷ್ಠ 55ರೂ.ನಿಂದ ಗರಿಷ್ಠ 200 ರೂ. ಆಗಿರುತ್ತದೆ. ಕೇಂದ್ರ ಸರಕಾರವು ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮನಾಂತರ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಯು ತಿಂಗಳಿಗೆ ನಿಶ್ಚಿತ 3000 ರೂ. ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆ ಹೊಂದಿ, ವಂತಿಕೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಫಲಾನುಭವಿಯ ಸಂಗಾತಿ ನಂತರವೂ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದು ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿ ದೊರೆಯಲು ಆರಂಭಗೊಂಡ ನಂತರ ವಂತಿಕೆದಾರರು ಮೃತ ಪಟ್ಟಲ್ಲಿ ಅವರ ಪತ್ನಿ ಅಥವಾ ಪತಿ ಪಿಂಚಣಿಯ ಶೇ.50ರಷ್ಟು ಪಿಂಚಣಿಯನ್ನು ಪಡೆಯಬಹುದು. ವಂತಿಕೆದಾರರು 60 ವರ್ಷ ಪೂರ್ವದಲ್ಲೇ ಯೋಜನೆಯಿಂದ ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯು ವಿದ್ಯುನ್ಮಾನ ಆಧಾರಿತ ವಾಗಿದ್ದು, ಎಸ್ಎಂಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲಕಾಲಕ್ಕೆ ತಿಳಿಸಲಾಗುವುದು.
ಜಿಲ್ಲೆಗೆ ಗುರಿ ನಿಗದಿ
''ಉಡುಪಿ ಜಿಲ್ಲೆಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ (ಪಿಎಂಎಸ್ವೈಎಂ)ಯಡಿ 24,700 ಹಾಗೂ ಎನ್ಪಿಎಸ್-ಟ್ರೇಡರ್ಸ್ ಯೋಜನೆಯಡಿ 5300 ಮಂದಿಯನ್ನು ನೋಂದಣಿ ಮಾಡಿಸಲು ಗುರಿ ನಿಗದಿ ಪಡಿಸಲಾಗಿದೆ. ಅರ್ಹ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ಈ ಪಿಂಚಣಿ ಯೋಜನೆಗಳ ಸದುಪ ಯೋಗ ಪಡೆದುಕೊಳ್ಳಬಹುದು. ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ನಿಶ್ಚಿತ ಪಿಂಚಣಿ ಪಡೆಯುವ ಮೂಲಕ, ನೆಮ್ಮದಿಯ ಜೀವನ ನಡೆಸಬಹುದು''.
-ಕುಮಾರ್, ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ