ಕುಂದಾಪುರ: ಹಕ್ಲಾಡಿಯಲ್ಲಿ ನರೇಗೋತ್ಸವ ಆಚರಣೆ
![ಕುಂದಾಪುರ: ಹಕ್ಲಾಡಿಯಲ್ಲಿ ನರೇಗೋತ್ಸವ ಆಚರಣೆ ಕುಂದಾಪುರ: ಹಕ್ಲಾಡಿಯಲ್ಲಿ ನರೇಗೋತ್ಸವ ಆಚರಣೆ](https://www.varthabharati.in/sites/default/files/images/articles/2022/02/2/323637-1643812286.jpg)
ಉಡುಪಿ, ಫೆ.2: ಕರ್ನಾಟಕ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾ ಸಂಘ, ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಹಾಗೂ ಹಕ್ಲಾಡಿ ಗಾಪಂಗಳ ಸಹಯೋಗದೊಂದಿಗೆ ಹಕ್ಲಾಡಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನರೇಗಾ ದಿವಸ್ ಅಂಗವಾಗಿ ಬುಧವಾರ ನರೇಗೋತ್ಸವವನ್ನು ಆಚರಿಸಲಾಯಿತು.
ಉಡುಪಿ ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್ ಹಾಗೂ ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೇತನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಡುಪಿ ಜಿಪಂನ ಯೋಜನಾ ನಿರ್ದೇಶಕ ಬಾಬು ಎಂ. ಮಾತನಾಡಿ, ನರೇಗಾ ಯೋಜನೆ ಇತರೆ ಯೋಜನೆಗಳಿಗಿಂತ ಪರಿಣಾಮಕಾರಿ. ಗ್ರಾಮೀಣ ಪ್ರದೇಶಗಳ ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಆರ್ಥಿಕ ಸದೃಢತೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ ನರೇಗಾ ಕಾಮಗಾರಿಗಳ ಕುರಿತು ವಿಡಿಯೋ ಡಾಕ್ಯೂಮೆಂಟರಿ ಬಿಡುಗಡೆಗೊಳಿಸಲಾಯಿತು. ಬಳಿಕ ಇ-ಶ್ರಮ್ ಯೋಜನೆಯಡಿ ಕೂಲಿಕಾರರ ನೋಂದಣಿ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು. ಸರಕಾರಿ ಸೌಲಭ್ಯಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಕಾರ್ಯಗಾರ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ‘ಪೌಷ್ಟಿಕ ಕೈ ತೋಟ’ ರಚನೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಕುಂದಾಪುರ ತಾಪಂನ ಕಾರ್ಯನಿರ್ವಾಹಕ ಅಧಿಕಾರಿ ಶ್ವೇತಾ ಎನ್, ಬೈಂದೂರು ತಾಪಂನ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ, ಬೈಂದೂರು ತಾಪಂನ ಸಹಾಯಕ ನಿರ್ದೇಶಕ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಹಕ್ಲಾಡಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಚಂದ್ರ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2022/02/2/UD-F2 NAREGA.jpg)