ನಿರಂತರ 17 ವಾರಗಳ ಗಾಂಧಿ ಓದು ಅಭಿಯಾನ ಸಮಾರೋಪ
![ನಿರಂತರ 17 ವಾರಗಳ ಗಾಂಧಿ ಓದು ಅಭಿಯಾನ ಸಮಾರೋಪ ನಿರಂತರ 17 ವಾರಗಳ ಗಾಂಧಿ ಓದು ಅಭಿಯಾನ ಸಮಾರೋಪ](https://www.varthabharati.in/sites/default/files/images/articles/2022/02/2/323643-1643813411.jpg)
ಕುಂದಾಪುರ, ಫೆ.2: ಕುಂದಾಪುರ ಸಮುದಾಯ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಜೆಸಿಐ ಕುಂದಾಪುರ ಇವುಗಳ ಸಹಯೋಗದೊಂದಿಗೆ ಅ.2ರಿಂದ ಜ.31ರವರೆಗೆ 17 ವಾರಗಳ ಕಾಲ ನಿರಂತರವಾಗಿ ವಿದ್ಯಾರ್ಥಿಗಳ ಜತೆ ಸಂವಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು.
ಗಾಂಧೀಜಿಯ ಪೋಸ್ಟರ್, ಕಾರ್ಡಿನಲ್ಲಿ ಗಾಂಧಿ ಕಥೆ, ಶಾಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ನನ್ನ ಸತ್ಯಾನ್ವೇಷಣೆ ಕುರಿತ ರಸಪ್ರಶ್ನೆ ಮುಂತಾದ ಸ್ಪರ್ಧೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಜೊತೆ ಗಾಂಧೀಜಿಯ ಕುರಿತು ಹೊಸ ಹೊಸ ಒಳ ನೋಟಗಳನ್ನು ನೀಡುವುದು ಹಾಗೂ ಮಕ್ಕಳ ಮನಸ್ಸಿನಾಳಕ್ಕೆ ಗಾಂಧಿ ಎಂಬ ಮಹಾತ್ಮನ ಇತಿಹಾಸದ ನೆನಪುಗಳು ಬೇರೂರಲು ಈ ಹೊಸ ಪ್ರಯತ್ನವನ್ನು ಕೈಗೆತ್ತಿಕೊಳ್ಳಲಾಗಿದೆ.
ಗಾಂಧೀಜಿಯ ಆತ್ಮಕಥೆ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಶಾಲಾ ಹಂತಗಳಿಗೆ ವಿತರಿಸಿ ವಿದ್ಯಾರ್ಥಿಗಳ ಓದಿಗೆ ಸಹಕರಿಸಲು ಮೆಂಟರ್ ಶಿಕ್ಷಕರನ್ನು ನೇಮಿಸಿ ವಾಟ್ಸಾಪ್ ಗುಂಪು ರಚಿಸಿ ಸೂಕ್ತ ಸಮಯಕ್ಕೆ ವಿದ್ಯಾರ್ಥಿಗಳ ಅನುಮಾನಗಳಿಗೆ ಸ್ಪಂದಿಸಿ ಅವರ ಆಲೋಚನೆಗಳಿಗೆ ವಿನೂತನ ಕಲ್ಪನೆ ನೀಡಲಾಗುತ್ತಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿಸುವ ಮೂಲಕ ಗಾಂಧೀ ಓದು ಅಭಿಯಾನ ಸಮಾಪ್ತಿಗೊಂಡಿತು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ, ಡಾ.ದಿನೇಶ್ ಹೆಗ್ಡೆ, ಜೆಸಿಐ ಚಾರಿ ಟೇಬಲ್ ಟ್ರಸ್ಟ್ ಅಧ್ಯಕ್ಷ ಸದಾನಂದ ನಾವಡ, ಜೆಸಿಐ ಅಧ್ಯಕ್ಷ ನಾಗರತ್ನ ಹೇರ್ಳೆ, ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಪ್ರಾಂಶುಪಾಲ ಅಭಿಲಾಷ ಹಂದೆ, ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್, ಕಾರ್ಮಿಕ ಮುಖಂಡ ನರಸಿಂಹ ಎನ್., ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್, ಕಾರ್ಯ ದರ್ಶಿ ಸದಾನಂದ ಬೈಂದೂರು, ಕೋಶಾಧಿಕಾರಿ ಬಾಲಕೃಷ್ಣ ಕೆಎಂ ಉಪಸ್ಥಿತರಿದ್ದರು.
ರಂಗಗೀತೆಗಳನ್ನು ರಂಗನಿರ್ದೇಶಕ ವಾಸುದೇವ ಗಂಗೆರಾ ಹಾಡಿದರು.ಗಾಂಧಿ ಓದಿನ ಅಂತಿಮ ಭಾಗವಾಗಿ ವಿದ್ಯಾರ್ಥಿಗಳಿಗಾಗಿ ಗಾಂಧಿ ಗ್ರಾಂಡ್ ಕ್ವಿಜ್ ನಡೆದಿದ್ದು 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕುಂದಾಪುರ ವಲಯ ದಲ್ಲಿ ಗಾಂಧಿ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ 100 ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ನಂತರ ಡಾಶ್ರೀಪಾದ್ ಭಟ್ ನಿರ್ದೇಶನದ ’ಮಾಧವಿ’ ನಾಟಕ ಪ್ರದರ್ಶನಗೊಂಡಿತು.