ಸಂಸತ್ತಿನಲ್ಲಿ ತಮಿಳುನಾಡು ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಧನ್ಯವಾದ ಅರ್ಪಿಸಿದ ಸ್ಟಾಲಿನ್
ಹೊಸದಿಲ್ಲಿ: ನಿನ್ನೆ ಸಂಸತ್ತಿನಲ್ಲಿ ತಮಿಳುನಾಡು ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಟ್ವಿಟರ್ನಲ್ಲಿ ಧನ್ಯವಾದ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸ್ಟಾಲಿನ್ ಎಲ್ಲಾ ತಮಿಳರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕಳೆದ ವರ್ಷ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಡಿಎಂಕೆ ವರಿಷ್ಠ ಸ್ಟಾಲಿನ್, "ಭಾರತೀಯ ಸಂವಿಧಾನದ ಕಲ್ಪನೆಯನ್ನು ಒತ್ತಿ ಹೇಳುವ ಮೂಲಕ ಸಂಸತ್ತಿನಲ್ಲಿ ನಿಮ್ಮ ರೋಚಕ ಭಾಷಣಕ್ಕಾಗಿ ನಾನು ಎಲ್ಲಾ ತಮಿಳರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
"ನೀವು ಸಂಸತ್ತಿನಲ್ಲಿ ತಮಿಳರ ದೀರ್ಘಕಾಲದ ವಾದಗಳಿಗೆ ಧ್ವನಿ ನೀಡಿದ್ದೀರಿ. ಇದು ಸ್ವಾಭಿಮಾನವನ್ನು ಗೌರವಿಸುವ ಅನನ್ಯ ಸಾಂಸ್ಕೃತಿಕ ಮತ್ತು ರಾಜಕೀಯ ಬೇರುಗಳ ಮೇಲೆ ನಿಂತಿದೆ" ಎಂದು ಅವರು ಹೇಳಿದರು.
"ನೀವು ಸಂವಿಧಾನವನ್ನು ಓದಿದರೆ, ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೇಶವು ರಾಜ್ಯಗಳ ಒಕ್ಕೂಟವಾಗಿದೆ. ಅಂದರೆ ತಮಿಳುನಾಡಿನ ನನ್ನ ಸಹೋದರನಿಗೆ, ಉತ್ತರ ಪ್ರದೇಶದ ನನ್ನ ಸಹೋದರನಿಗೆ ಸಮಾನವಾದ ಹಕ್ಕುಗಳು ಇರಬೇಕು ”ಎಂದು ಕಾಂಗ್ರೆಸ್ ಸಂಸದ ರಾಹುಲ್ ಬುಧವಾರ ಸಂಸತ್ತಿನಲ್ಲಿ ಮಾಡಿರುವ 45 ನಿಮಿಷಗಳ ಭಾಷಣದಲ್ಲಿ ಹೇಳಿದ್ದರು.