ಹಿಜಾಬ್ ವಿವಾದ; ಕುಂದಾಪುರದ ಸಂತ್ರಸ್ತ ವಿದ್ಯಾರ್ಥಿನಿಯರಿಂದ ಎಡಿಸಿಗೆ ಮನವಿ
ಉಡುಪಿ, ಫೆ.5: ಹಿಂದಿನಂತೆ ಸಮವಸ್ತ್ರದೊಂದಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಭಂಡರ್ಕಾರ್ಸ್ ಕಾಲೇಜುಗಳ ಸಂತ್ರಸ್ತ ವಿದ್ಯಾರ್ಥಿನಿಯರು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಾವು, ಕಾಲೇಜಿನ ಆರಂಭದಿಂದಲೇ ಸಮವಸ್ತ್ರದೊಂದಿಗೆ ನಮ್ಮ ಕಡ್ಡಾಯ ಸಂಪ್ರದಾಯದಂತೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಈ ಹಿಂದಿನ ವರ್ಷಗಳಲ್ಲೂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿಯೇ ತರಗತಿಗೆ ಹಾಜರಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಫೆ.3ರಂದು ನಾವು ಸಮವಸ್ತ್ರದೊಂದಿಗೆ ಸಮವಸ್ತ್ರದ ಶಾಲನ್ನೇ ಶಿರವಸ್ತ್ರವನ್ನಾಗಿ ಧರಿಸಿ ಬಂದಿದ್ದೇವೆ. ಆದರೆ ಇದೀಗ ನಮಗೆ ಕಾಲೇಜಿನ ವಠಾರ ಪ್ರವೇಶಿಸದಂತೆ ತಡೆ ಹಿಡಿಯಲಾಗಿದೆ. ವಾರ್ಷಿಕ ಪರೀಕ್ಷೆಗೆ ಎರಡು ತಿಂಗಳಿರುವ ಈ ಸಮಯ ದಲ್ಲಿ ಸಮಸ್ಯೆ ಸೃಷ್ಟಿಸಿರುವುದರಿಂದ ನಮ್ಮ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದುದರಿಂದ ಈ ಹಿಂದಿನಂತೆ ನಮ್ಮ ಕಡ್ಡಾಯ ಸಂಪ್ರದಾಯ ಮತ್ತು ಸಂವಿಧಾನ ಬದ್ಧ ಹಕ್ಕಾದ ಶಿವಸ್ತ್ರದೊಂದಿಗೆ ತರಗತಿಗೆ ಹಾಜರಾಗಲು ಅನುವುಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಮನವಿ ಯಲ್ಲಿ ಒತ್ತಾಯಿಸಿದ್ದಾರೆ.