ಚಿತ್ರಮಂದಿರ, ಜಿಮ್, ಈಜುಕೊಳದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ: ಉಡುಪಿ ಡಿಸಿ ಕೂರ್ಮಾರಾವ್
'ಕೋವಿಡ್ ನಿರ್ಬಂಧಗಳಲ್ಲಿ ಇನ್ನಷ್ಟು ವಿನಾಯಿತಿ'

ಉಡುಪಿ, ಫೆ.7: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಹೊರಡಿಸಲಾದ ಹೆಚ್ಚುವರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ಜಿಲ್ಲೆಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ, ಹೊರಡಿಸಲಾದ ಆದೇಶದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಇನ್ನು ಮುಂದೆ ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ, ಜಿಮ್ ಮತ್ತು ಯೋಗ ಕೇಂದ್ರ ಹಾಗೂ ಈಜುಕೊಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ.100ರಷ್ಟು ಸಾಮರ್ಥ್ಯದೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ ನಿಗದಿತ ಆಸನ ಸಾಮರ್ಥ್ಯವನ್ನು ಅವು ಮೀರಬಾರದು. ಎರಡು ಡೋಸ್ ಲಸಿಕೆ ಪ್ರಮಾಣ ಪತ್ರ ಹೊಂದಿರುವ, ರೋಗ ಲಕ್ಷಣ ರಹಿತರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಪ್ರವೇಶ ಸಮಯದಲ್ಲಿ ಥರ್ಮಲ್ ಸ್ಕಾನ್ ಬಳಸಿ ಜ್ವರ ಲಕ್ಷಣಗಳ ಕುರಿತು ತಪಾಸಣೆ ನಡೆಸಬೇಕು ಮತ್ತು ಹ್ಯಾಂಡ್ ಸ್ಯಾನಟೈಸರ್ ಬಳಸುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋ ರಿಯಂಗಳಲ್ಲಿ ಸಾರ್ವಜನಿಕರು ಪ್ರದರ್ಶನ ಸಮಯ ಸೇರಿದಂತೆ ಎಲ್ಲಾ ಸಮಯ ದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿರುವ ಕುರಿತು ಸಂಘಟಕರು ವೆುೀಲ್ವಿಚಾರಣೆ ನಡೆಸಬೇಕು. ಪ್ರತಿ ಪ್ರದರ್ಶನದ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿರುತ್ತದೆ. ಸಿಪಿಡಬ್ಲೂಡಿ ಮಾರ್ಗಸೂಚಿಗಳ ಪ್ರಕಾರ ಎ.ಸಿ. ಕಾರ್ಯನಿರ್ವಹಿಸಬೇಕು. ಮೇಲ್ಕಂಡ ಸ್ಥಳಗಳ ಒಳಗೆ ಉಪಾಹಾರ, ಆಹಾರ ಮತ್ತು ಪಾನೀಯಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ತಿಳಿಸಿದೆ.
ಜಿಮ್ ಮತ್ತು ಯೋಗ ಕೇಂದ್ರಗಳು ಚಟುವಟಿಕೆಯನ್ನು ಹೊರಾಂಗಣದಲ್ಲಿ ಮತ್ತು ತೆರೆದ ಸ್ಥಳದಲ್ಲಿ ಇತರರಿಂದ ಯಾವುದೇ ದೂರುಗಳಿಲ್ಲದೆ ನಡೆಸಬೇಕು. 2 ಮೀ. ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಸೆಷನ್ ಅಥವಾ ಬ್ಯಾಚ್ನ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ಸಿಪಿಡಬ್ಲ್ಯೂಡಿ ಮಾರ್ಗಸೂಚಿಗಳ ಪ್ರಕಾರ ಎ.ಸಿ ನಿರ್ವಹಿಸಬೇಕು.
ಈಜುಕೊಳಗಳಲ್ಲಿ 2 ಮೀ.ನ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಸೆಷನ್/ ಬ್ಯಾಚ್ನ ನಂತರ ಈಜುಗಾರರು ಉಪಯೋಗಿಸಿರುವ ಬದಲಾವಣೆ ಕೊಠಡಿ/ ವಿಶ್ರಾಂತಿ ಕೊಠಡಿಗಳನ್ನು ಸ್ಯಾನಟೈಸ್ ಮಾಡಬೇಕು.
ಮೇಲಿನ ಈ ಎಲ್ಲಾ ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಪ್ರಾಕೃತಿಕ ವಿಕೋಪ ನಿರ್ವಹಣೆ ಕಾಯ್ದೆ 2005, ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020 ಹಾಗೂ ಐಪಿಸಿ ಸೆಕ್ಷನ್ 188ರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.