ಹಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ
![ಹಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ ಹಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ](https://www.varthabharati.in/sites/default/files/images/articles/2022/02/7/324282-1644245766.jpg)
ಕುಂದಾಪುರ, ಫೆ.7: ರಾಜ್ಯ ಸರಕಾರ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿರುವ ಹಿನ್ನೆಲೆಯಲ್ಲಿ ಉಡುಪಿ, ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಕೆಲವು ಸರಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಫೆ.7ರಂದು ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಯಿತು. ಈ ಮೂಲಕ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ಇನ್ನಷ್ಟು ತಾರಕಕ್ಕೇರಿದೆ.
ಸರಕಾರದ ಸಮವಸ್ತ್ರ ಕಡ್ಡಾಯಗೊಳಿಸಿದರೂ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಕಾಲೇಜಿನವರು ಕಾಲೇಜಿನ ಕಂಪೌಂಡು ಗೋಡೆಗೆ ಸರಕಾರದ ಆದೇಶ ಪ್ರತಿ ಹಚ್ಚಿ, ವಿದ್ಯಾರ್ಥಿನಿಯರಿಗೆ ಈ ವಿಚಾರದ ಕುರಿತು ಸೂಚನೆ ನೀಡಿದರು.
ಆದರೆ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಅದನ್ನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಶನಿವಾರ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಗೇಟಿನ ಹೊರಗಡೆ ಬದಲು ಕಾಲೇಜು ಆವರಣದಲ್ಲಿನ ಕೊಠಡಿಯಲ್ಲಿ ವಿದ್ಯಾರ್ಥಿನಿಯರಿಗೆ ಕೂರಲು ಅವಕಾಶ ನೀಡ ಲಾಯಿತು. ಮಧ್ಯಾಹ್ನ 3.15ರ ಸುಮಾರಿಗೆ ಆ ವಿದ್ಯಾರ್ಥಿ ನಿಯರು ಮನೆಗಳಿಗೆ ವಾಪಾಸ್ ತೆರಳಿದರು. ಕಾಲೇಜು ಆವರಣದೊಳಗೆ ಸಾರ್ವಜನಿಕರು ಹಾಗೂ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಕೇಸರಿ ಶಾಲು ವಿವಾದ
ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿ ಗಳು ಬೆಳಗ್ಗೆ ಕೇಸರಿ ಶಾಲು ಧರಿಸಿಕೊಂಡು ಜೈಶ್ರೀರಾಮ್ ಘೋಷಣೆಗಳನ್ನು ಕೂಗುತ್ತ ಕಾಲೇಜಿಗೆ ಆಗಮಿಸಿದರು. ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದರು.
ಕಾಲೇಜಿನ ಗೇಟ್ ಬಳಿ ವಿದ್ಯಾರ್ಥಿಗಳನ್ನು ತಡೆದ ಪ್ರಾಂಶುಪಾಲರು, ಬೇರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಅಡ್ಡಿಯುಂಟು ಮಾಡದಂತೆ ಹಾಗೂ ಕೇಸರಿ ಶಾಲು ತೆಗೆದು ಬರುವಂತೆ ಸೂಚನೆ ನೀಡಿದರು. ಅದರಂತೆ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ತರಗತಿಗಳಿಗೆ ತೆರಳಿದರು.
ಕೋಟೇಶ್ವರದ ಶ್ರೀಕಾಳಾವರ ವರದರಾಜ ಎಂ.ಶೆಟ್ಟಿ ಪದವಿ ಕಾಲೇಜಿಗೆ ಸೋಮವಾರ ಬೆಳಗ್ಗೆ ಹಿಜಾಬ್ ಧರಿಸಿ ಬಂದ ಮೂವರು ವಿದ್ಯಾರ್ಥಿನಿಯರನ್ನು ಉಪನ್ಯಾಸಕರು ಗೇಟ್ ಬಳಿಯೇ ತಡೆದರು.
ಈ ವೇಳೆ ಕೆಲವು ವಿದ್ಯಾರ್ಥಿಗಳು, ಅವರು ಹಿಜಾಬ್ ತೆಗೆಯದಿದ್ದರೆ ನಾವು ಕೇಸರಿ ಶಾಲು ಧರಿಸುತ್ತೇವೆಂದು ಕೇಸರಿ ಶಾಲು ಧರಿಸಿಕೊಂಡು ಗೇಟ್ ಹೊರ ಭಾಗ ಪ್ರತಿಭಟಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ವಾಪಾಸ್ಸು ಮನೆಗೆ ಹೋದರು. ಕೇಸರಿ ಶಾಲು ತೆಗೆದಿಟ್ಟ ವಿದ್ಯಾರ್ಥಿಗಳು ತರಗತಿಗೆ ತೆರಳಿದರು.
ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಸರಕಾರದ ಆದೇಶದಂತೆ ತರಗತಿಗೆ ಪ್ರವೇಶ ಕಲ್ಪಿಸದೆ ಪ್ರತ್ಯೇಕ ಕೊಠಡಿಯಲ್ಲಿ ಕೂರಲು ಅವಕಾಶ ನೀಡಲಾಯಿತು. ಆದರೆ ಮಕ್ಕಳು ಅಲ್ಲಿ ಕೂರದೆ ಮನೆಗೆ ತೆರಳಿದರು.
ಉಪ್ಪುಂದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ರುವುದಕ್ಕೆ ಪ್ರತಿಯಾಗಿ ಕೆಲವರು ಕೇಸರಿ ಶಾಲು ಕೂಡ ಧರಿಸಿದರು. ಪರೀಕ್ಷೆ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಆದರೆ ಮಂಗಳವಾರದಿಂದ ಸರಕಾರದ ನಿರ್ದೇಶನದಂತೆ ಏಕರೂಪ ಸಮವಸ್ತ್ರ ನೀತಿ ಅನುಸರಿಸಲು ಸೂಚಿಸಲಾಗಿದೆ.
ನಾವುಂದ ಕಾಲೇಜಿನಲ್ಲಿ ಪೋಷಕರ ಸಭೆ ನಡೆಯಿತು. ಬಿರುಸಿನ ಚರ್ಚೆ ಬಳಿಕ ಹಿಜಾಬ್ ಧರಿಸಿ ಬರಲು ಅವಕಾಶ ಇಲ್ಲವಾದರೆ ಮಕ್ಕಳನ್ನು ಕಾಲೇಜಿಗೆ ಕಳಿಸುವುದಿಲ್ಲ ಎಂದು ಪೋಷಕರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಹಿಜಾಹ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ನೀಡಿ ಸರಕಾರದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ನಾಳೆಯಿಂದ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ಕಲ್ಪಿಸುವುದಿಲ್ಲ ಎಂದು ಪ್ರಾಂಶುಪಾಲರು ಸೂಚನೆ ನೀಡಿದರು. ಒಂದು ವೇಳೆ ಹಿಜಾಬ್ಗೆ ಅವಕಾಶ ನೀಡಿದರೆ ನಾವು ಕೇಸರಿ ಶಾಲು ಧರಿಸಿಕೊಂಡು ಬರುತ್ತೇವೆ ಎಂದು ಕೆಲವು ವಿದ್ಯಾರ್ಥಿಗಳು ಘೋಷಿಸಿದರು. ಕಾಲೇಜು ಆವರಣದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಗಂಗೊಳ್ಳಿಯಲ್ಲಿ ಮಾತಿನ ಚಕಮಕಿ
ಗಂಗೊಳ್ಳಿಯ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ನಿರಾಕರಿಸಲಾಯಿತು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಂಡಿರುವುದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಬರುವಂತೆ ಪ್ರಾಂಶುಪಾಲರು ಸೂಚನೆ ನೀಡಿದರು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಈ ಸಂಬಂಧ ವಿದ್ಯಾರ್ಥಿನಿಯರ ಪೋಷಕರ ಜೊತೆ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಆಗಮಿಸಿ ಸರಕಾರದ ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಸರಕಾರದ ಆದೇಶದಂತೆ ಕಾಲೇಜಿನ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸೂಚನೆ ನೀಡಿದರು.
‘ಟಿಸಿ ಪಡೆದು ನಿಮ್ಮ ದಾರಿ ನೋಡಿಕೊಳ್ಳಿ’
ಬಸ್ರೂರು ಶ್ರೀಶಾರದಾ ಕಾಲೇಜಿನಲ್ಲಿ ಇಂದು ಬೆಳಗ್ಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ ಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ತರಗತಿ ಪ್ರವೇಶವನ್ನು ನಿರಾಕರಿಸಲಾಯಿತು.
‘ಬಳಿಕ ಬಂದ ಆಡಳಿತ ಮಂಡಳಿಯವರು, ಹಿಜಾಬ್ ಹಾಕಿದರೆ ತರಗತಿಗೆ ಬಿಡುವುದಿಲ್ಲ ಎಂದು ತಿಳಿಸಿದರು. ಇಲ್ಲದಿದ್ದರೆ ನೀವು ಟಿಸಿ ಪಡೆದುಕೊಂಡು ನಿಮ್ಮ ದಾರಿ ನೋಡಿಕೊಳ್ಳಿ ಎಂದರು. ನಾವು ನಾಲ್ಕು ವರ್ಷಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಹಕ್ಕು. ಹಿಜಾಬ್ ನಮ್ಮ ಧರ್ಮದಲ್ಲಿ ಕಡ್ಡಾಯವಾದ ವಸ್ತ್ರ. ಆದರೆ ಕೇಸರಿ ಶಾಲು ಕಡ್ಡಾಯ ಅಲ್ಲ. ವಿವಾದ ಮಾಡುವುದಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದರು.
![](https://www.varthabharati.in/sites/default/files/images/galllery/2022/02/7/UD-F7 HIJAB1.jpg)