ಹಿಜಾಬ್- ಕೇಸರಿ ಶಾಲು ವಿವಾದ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ: ಶಾಸಕ ರಘುಪತಿ ಭಟ್

ಉಡುಪಿ, ಫೆ.8: ಉಡುಪಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಈ ವಿವಾದ ಆರಂಭಿಸದಿದ್ದರೆ ಇದು ಈ ಮಟ್ಟಕ್ಕೆ ಹೋಗುತ್ತಿ ರಲಿಲ್ಲ. ಯಾವಾಗಲೂ ಕ್ರಿಯೆಗೆ ಪ್ರತ್ರಿಕ್ರಿಯೆ ಇರುತ್ತದೆ. ಅದು ಈಗ ಆಗಿದೆ. ಶಿಕ್ಷಣ ಕೇಂದ್ರ ಹೋಗಿ ಧಾರ್ಮಿಕ ಸಂಘರ್ಷ ಕೇಂದ್ರವಾಗುತ್ತದೆ ಎಂದು ನಾನು ಆಗ ಹೇಳಿದಂತೆ ಈಗ ಆಗಿದೆ. ಇದರ ಬಗ್ಗೆ ನಮಗೆ ಬೇಸರ ಇದೆ ಎಂದು ಉಡುಪಿ ಶಾಸಕ ಕೆ.ರಘು ಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ. ಆದುದರಿಂದ ಎರಡು ದಿನಗಳಲ್ಲಿ ಆದೇಶ ಹೊರಡಿಸಬಹುದು. ಹೈಕೋರ್ಟ್ ಆದೇಶ ಬರುವ ವರೆಗೆ ಎರಡು ಕಡೆಯವರು ಸರಕಾರದ ಆದೇಶವನ್ನು ಪಾಲಿಸಬೇಕು. ಹಿಜಾಬ್ ಹಾಕಬಹುದು ಎಂದು ಹೈಕೋರ್ಟ್ ಆದೇಶ ನೀಡಿದರೆ ಮರು ದಿನದಿಂದಲೇ ಹಿಜಾಬ್ ಹಾಕಿಕೊಂಡು ಬರಲಿ. ಆದರೆ ಹಾಕಬಾರದು ಎಂದು ಆದೇಶ ನೀಡಿದರೆ, ಯಾರು ಹಾಕಬಾರು ಎಂದರು.
ಚುನಾವಣೆಗೂ ಹಿಜಾಬ್ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ. ಮುಸ್ಲಿಮ್ ಮತಕ್ಕೆ ಈಗ ಎಸ್ಡಿಪಿಐ ಮತ್ತು ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಆರಂಭವಾಗಿದೆ. ಹಾಗಾಗಿ ಈ ವಿವಾದ ಉದ್ಭವಿಸಿದೆ. ನಾವು ಇಂದು ಜವಾಬ್ದಾರಿ ಸ್ಥಾನದಲ್ಲಿರುವುದರಿಂದ ನಮಗೆ ಈ ವಿವಾದ ಬೆಳೆಯಬಾರದು, ಆದಷ್ಟು ಬೇಗ ಮುಗಿುಬೇಕು ಎಂದು ಅವರು ತಿಳಿಸಿದರು.
ಈ ವಿವಾದ ಎಲ್ಲಡೆ ಆರಂಭವಾಗಲು ಉಡುಪಿ ಸರಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರ ಮಕ್ಕಳ ಹಠ ಮಾರಿ ದೋರಣೆ ಮತ್ತು ಅವರನ್ನು ದಾರಿ ತಪ್ಪಿಸಿದ ಸಂಘಟನೆಗಳೇ ಕಾರಣ. ನಾವು ಮೊದಲು ಆ ಮಕ್ಕಳಿಗೆ ಸಾಕಷ್ಟು ತಿಳಿ ಹೇಳಿದ್ದೇವೆ. ಇವರಿಂದಾಗಿ ಈ ವಿವಾದ ಇಡೀ ಜಿಲ್ಲೆ ಮತ್ತು ಈಗ ರಾಜ್ಯದ ಎಲ್ಲ ಕಡೆ ವಿಸ್ತರಿಸಿದೆ ಎಂದು ಅವರು ಹೇಳಿದರು.
‘ಯಶ್ಪಾಲ್ರನ್ನು ವಜಾ ಮಾಡಲು ಆಗಲ್ಲ’
ಯಾರೋ ಹೇಳಿದರು ಎಂದು ಉಡುಪಿ ಸರಕಾರಿ ಬಾಲಕರಿಯ ಪದವಿ ಪೂರ್ವ ಕಾಲೇಜಿನ ಅಭಿವೃಧಿ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಯಶ್ಪಾಲ್ ಸುವರ್ಣ ಅವರನ್ನು ವಜಾ ಮಾಡಲು ಆಗುವುದಿಲ್ಲ ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಅವರನ್ನು ನೇಮಕ ಮಾಡುವ ಅಧಿಕಾರ ಶಾಸಕರಿಗೆ ಇದೆ. ಅವರನ್ನು ಕೇವಲ ಬಿಜೆಪಿ ಮುಖಂಡ ಎಂಬ ನೆಲೆಯಲ್ಲಿ ಉಪಾಧ್ಯಕ್ಷ ಮಾಡಿರುವುದಲ್ಲ. ಅವರ ಮನೆ ಅಲ್ಲೇ ಹತ್ತಿರ ಇದೆ ಮತ್ತು ದೊಡ್ಡ ದಾನಿಯಾಗಿದ್ದಾರೆ. ಆ ದೃಷ್ಠಿಯಿಂದ ಮಾಡಿದ್ದೇವೆ. ಅವರನ್ನು ವಜಾ ಮಾಡಲು ಆಗಲ್ಲ ಎಂದರು.