ಎರಡನೇ ಏಕದಿನ: ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ
ಕನ್ನಡಿಗ ಕೃಷ್ಣ ನೇತೃತ್ವದ ಬೌಲಿಂಗ್ ದಾಳಿಗೆ ವಿಂಡೀಸ್ ಕಂಗಾಲು

Photo: BCCI
ಅಹಮದಾಬಾದ್, ಫೆ. 9: ಕನ್ನಡಿಗ ಪ್ರಸಿದ್ಧ ಕೃಷ್ಣ (4-12)ನೇತೃತ್ವದ ಬೌಲಿಂಗ್ ದಾಳಿಗೆ ಕಂಗಾಲಾದ ವೆಸ್ಟ್ ಇಂಡೀಸ್ ತಂಡ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 44 ರನ್ ಗಳ ಅಂತರದಿಂದ ಸೋಲುಂಡಿದೆ. ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಬಳಗ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 238 ರನ್ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ 46 ಓವರ್ಗಳಲ್ಲಿ 193 ರನ್ ಗಳಿಸಿ ಸರ್ವಪತನಗೊಂಡಿತು. ವೇಗದ ಬೌಲರ್ ಕೃಷ್ಣ ಅವರು ಕೆಮರ್ ರೋಚ್ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ವಿಂಡೀಸ್ ಇನಿಂಗ್ಸ್ಗೆ ತೆರೆ ಎಳೆದರು.
ಶಾರ್ದೂಲ್ ಠಾಕೂರ್(2-41), ದೀಪಕ್ ಹೂಡ(1-24), ಸುಂದರ್(1-28), ಸಿರಾಜ್(1-38) ಹಾಗೂ ಯಜುವೇಂದ್ರ ಚಹಾಲ್(1-45) ವಿಂಡೀಸ್ನ್ನು 193 ರನ್ಗೆ ನಿಯಂತ್ರಿಸುವಲ್ಲಿ ನೆರವಾದರು. ವಿಂಡೀಸ್ ಪರವಾಗಿ ಬ್ರೂಕ್ಸ್(44, 64 ಎಸೆತ, 2 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಅಕೀಲ್ ಹೊಸೈನ್(34), ಹೋಪ್(27),ಸ್ಮಿತ್(24) ಹಾಗೂ ಬ್ರೆಂಡನ್ ಕಿಂಗ್(18) ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ಭಾರತವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.







