ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನ್ಯಾಯಾಧೀಶೆಯ ಮರು ಸೇರ್ಪಡೆಗೆ ಸುಪ್ರೀಂ ಆದೇಶ

ಹೊಸದಿಲ್ಲಿ: 2014 ರಲ್ಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ರಾಜೀನಾಮೆ ನೀಡಿದ ನ್ಯಾಯಾಧೀಶೆಯನ್ನು ಮರುಸೇರ್ಪಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ. 2014ರಲ್ಲಿ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿತ್ತು ಎಂಬ ಕಾರಣಕ್ಕೆ ಮಹಿಳಾ ನ್ಯಾಯಾಧೀಶರು ಮರುಸೇರ್ಪಡೆ ಕೋರಿದ್ದರು.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ. ಆರ್ .ಗವಾಯಿ ಅವರನ್ನೊಳಗೊಂಡ ಪೀಠವು ನ್ಯಾಯಾಧೀಶೆಯ ರಾಜೀನಾಮೆಯನ್ನು ಅಂಗೀಕರಿಸಿದ ಆದೇಶವನ್ನು ರದ್ದುಗೊಳಿಸಿತು ಹಾಗೂ ಮಧ್ಯಪ್ರದೇಶದ ನ್ಯಾಯಾಂಗದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಅವರನ್ನು ಮರುನೇಮಕಗೊಳಿಸುವಂತೆ ನಿರ್ದೇಶಿಸಿತು.
ಆದಾಗ್ಯೂ, ನ್ಯಾಯಾಧೀಶೆ ರಜೆ ಅವಧಿಯ ವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜುಲೈ 2014 ರಲ್ಲಿ ನ್ಯಾಯಾಧೀಶೆ ತನಗಾಗಿರುವ ಲೈಂಗಿಕ ಕಿರುಕುಳವನ್ನು ವಿವರಿಸಿ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದರು. ನಂತರ ಅವರು ಗ್ವಾಲಿಯರ್ನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಐಟಂ ಸಾಂಗ್ಗೆ ಡ್ಯಾನ್ಸ್ ಮಾಡುವಂತೆ ಹೈಕೋರ್ಟ್ ನ್ಯಾಯಾಧೀಶರು ನನಗೆ ಹೇಳಿದ್ದಾರೆ ಎಂದು ಪತ್ರದಲ್ಲಿ ನ್ಯಾಯಾಧೀಶೆ ದೂರಿದ್ದರು. ದೂರದ ಸ್ಥಳಕ್ಕೆ ತನ್ನ ವರ್ಗಾವಣೆಗೆ ನ್ಯಾಯಾಧೀಶರು ಪ್ರಭಾವ ಬೀರಿದ್ದಾರೆ ಎಂದು ನ್ಯಾಯಾಧೀಶೆ ಆರೋಪಿಸಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಲೈಂಗಿಕ ಕಿರುಕುಳದ ಆರೋಪಗಳ ತನಿಖೆ ನಡೆಸಿದ ರಾಜ್ಯಸಭೆ ನೇಮಿಸಿದ ಸಮಿತಿಯು ಹೈಕೋರ್ಟ್ ನ್ಯಾಯಾಧೀಶರಿಗೆ ಕ್ಲೀನ್ ಚಿಟ್ ನೀಡಿತ್ತು. ದೂರುದಾರರಿಗೆ ಕಿರುಕುಳ ನೀಡಲು ನ್ಯಾಯಾಧೀಶರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸಮಿತಿ ಹೇಳಿತ್ತು.







