ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿ: ಸಿಎಂ ಬೊಮ್ಮಾಯಿಗೆ ಸಭಾಪತಿ ಬಸವರಾಜ ಹೊರಟ್ಟಿ ಮನವಿ

ಬೆಂಗಳೂರು, ಫೆ. 10: ‘ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸರಕಾರಿ ನೌಕರರ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡುವ ಬಗ್ಗೆ ಆಯವ್ಯಯದಲ್ಲಿ ಅನುಮೋದನೆ ನೀಡುವುದು ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಗುರುವಾರ ಈ ಸಂಬಂಧ ಪತ್ರ ಬರೆದಿರುವ ಅವರು, ‘1994-95ರ ನಂತರ ಪ್ರಾರಂಭಿಸಿದ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವುದು. 2021ರ ಡಿಸೆಂಬರ್ 31ರ ವರೆಗೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ಕ್ರಮ, ಕಾಲ್ಪನಿಕ ವೇತನ ವರದಿಯನ್ನು ಜಾರಿಗೊಳಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸುವದರೊಂದಿಗೆ 382ಕೋಟಿ ರೂ.ಅನುದಾನ ಒದಗಿಸಬೇಕು.
2006ರ ಎಪ್ರಿಲ್ 1ರ ನಂತರ ನೇಮಕಗೊಂಡ ಹಾಗೂ ಅನುಮೋದನೆಗೊಂಡ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ನೂತನ ಪಿಂಚಣಿ ಯೋಜನೆಯಡಿ ಸೇರಿಸಿ ಆಡಳಿತ ಮಂಡಳಿಯವರೇ ತಮ್ಮ ಪಾಲಿನ ವಂತಿಗೆ ತುಂಬಬೇಕೆಂದು ಆದೇಶಿಸಿದ್ದರಿಂದ ತೊಂದರೆಯಾಗಿದ್ದು, ಆಡಳಿತ ಮಂಡಳಿಯ ಬದಲು ಸರಕಾರವೇ ವಂತಿಗೆ ತುಂಬಲು 132 ಕೋಟಿ ರೂ. ಅನುದಾನ ನೀಡಬೇಕು. 1994-95ಕ್ಕಿಂತ ಮೊದಲು ಪ್ರಾರಂಭಿಸಿದ ಖಾಸಗಿ ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಪ್ರಸ್ತಾಪಿಸಿ ಸೂಕ್ತ ಅನುದಾನವನ್ನು ಒದಗಿಸಬೇಕು ಎಂದು ಅವರು ಕೋರಿದ್ದಾರೆ.
ಖಾಸಗಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದರೊಂದಿಗೆ ಆಯವ್ಯಯದಲ್ಲಿ ಸೂಕ್ತ ಅನುದಾನ ನೀಡಬೇಕು. 1985ರಿಂದ 1987ರ ವರೆಗೆ ಪ್ರಾರಂಭಿಸಿದ ಖಾಸಗಿ ಪಾಲಿಟೆಕ್ನಿಕ್ಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಹಿಂದೆ ಆದೇಶ ಹೊರಡಿಸಿದ್ದು, ಆರ್ಥಿಕ ಇಲಾಖೆ ಅನುದಾನ ಒದಗಿಸಬೇಕು. ಖಾಸಗಿ ಐಟಿಐ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಎಂದು ಬಸವರಾಜ ಹೊರಟ್ಟಿ ಕೋರಿದ್ದಾರೆ.







