ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲಿಸೋಣ : ಶಾಸಕ ರಘುಪತಿ ಭಟ್
ಕೇಸರಿ ಶಾಲು, ಹಿಜಾಬ್ ವಿವಾದ

ರಘುಪತಿ ಭಟ್
ಉಡುಪಿ, ಫೆ.10: ಕೇಸರಿ ಶಾಲು, ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಉತ್ತಮ ಆದೇಶ ನೀಡಿದೆ. ನಾವೆಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು. ಇದೊಂದು ಜವಾಬ್ದಾರಿಯುತ ನಿರ್ಣಯವಾಗಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ವಾರದಿಂದ ಪ್ರತಿದಿನ ವಿಚಾರಣೆ ನಡೆಯುತ್ತದೆ. ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಆದೇಶ ನೀಡಿದೆ. ಮುಂದಿನ ಒಂದುವರೆ ತಿಂಗಳಿನಲ್ಲಿ ಪರೀಕ್ಷೆ ಪ್ರಾರಂಭ ಆಗುತ್ತದೆ. ಇನ್ನೂ ಹೆಚ್ಚು ರಜೆ ನೀಡಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂಬ ಹಿನ್ನಲೆ ಈ ಆದೇಶ ಬಂದಿದೆ ಎಂದರು.
ಈ ಹಿಂದೆ ನಡೆದ ಘಟನೆಗಳನ್ನು ಮರೆಯೋಣ. ಕಾಲೇಜು ಪ್ರಾರಂಭಿಸಲು ಸಹಕರಿಸೋಣ. ನಮ್ಮ ಶೈಕ್ಷಣಿಕ ಭವಿಷ್ಯ ದೃಷ್ಟಿಯಿಂದ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆ ಆಗಿದೆ. ನಾವು ಏನೇ ಇದ್ದರೂ ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡಬೇಕು ಎಂದು ಅವರು ತಿಳಿಸಿದರು.
ನಾಳೆಯಿಂದ ಕ್ಲಾಸ್ಗಳನ್ನು ಪ್ರಾರಂಭಿಸಬೇಕು. ಯಾರು ಕೂಡ ಕೇಸರಿ ಶಾಲನ್ನು ಹಾಕಬೇಡಿ. ಹಿಜಾಬ್ ಅನ್ನು ಕ್ಲಾಸ್ನ ಒಳಗೆ ಹಾಕಬೇಡಿ ಎಂದು ರಘುಪತಿ ಭಟ್ ಮನವಿ ಮಾಡಿದರು.