ಭಾರತೀಯ ನಾಗರಿಕ ಸೇವಾ ವೃಂದದ ಆಯ್ಕೆಗೆ ಮಾನದಂಡ ನಿಗದಿಪಡಿಸಿ ಆದೇಶಿಸಿದ ರಾಜ್ಯ ಸರಕಾರ

ಬೆಂಗಳೂರು, ಫೆ.10: ರಾಜ್ಯೇತರ ಸಿವಿಲ್ ಸರ್ವೀಸ್ ಹುದ್ದೆಗಳಲ್ಲಿನ ಅಧಿಕಾರಿಗಳನ್ನು ಭಾರತೀಯ ನಾಗರಿಕ ಸೇವಾ ವೃಂದಕ್ಕೆ ಭಾರತೀಯ ನಾಗರಿಕ ಸೇವಾ(ಆಯ್ಕೆ ಮೂಲಕ ನೇಮಕಾತಿ) ನಿಯಮಾವಳಿ 1997ರನ್ವಯ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸರಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್., ಮಾನದಂಡಗಳನ್ನು ನಿಗದಿಪಡಿಸಿರುವ ಬಗ್ಗೆ ಆದೇಶ ಹೊರಡಿಸಿದ್ದಾರೆ.
ನಿಯಮಾವಳಿ 1997ರ ಸಂಬಂಧ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನದಂತೆ ಅರ್ಹರಿರುವ ಅಭ್ಯರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗವು ಅಧಿಸೂಚಿಸುವ ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಲಿಖಿತ ಪರೀಕ್ಷೆಯಲ್ಲಿ ಎಲ್ಲ ಅಧಿಕಾರಿಗಳು ಪಡೆದ ಅಂಕಗಳೊಂದಿಗೆ ಶ್ರೇಣಿ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸತಕ್ಕದ್ದು, ಶ್ರೇಣಿಯ ಪಟ್ಟಿ ಸ್ವೀಕೃತಗೊಂಡ ನಂತರ, ರಾಜ್ಯ ಸರಕಾರವು ಅಧಿಕಾರಿಗಳು ಅರ್ಹರೇ ಎಂಬುದನ್ನು ಪರಿಶೀಲಿಸಲು ಅರ್ಹ ಅಧಿಕಾರಿಗಳ ಸಿಆರ್ ದಸ್ತಾವೇಜಿನ ಜತೆಗೆ ನಿಗದಿತ ಪ್ರೊ-ಫಾರ್ಮ್ನಲ್ಲಿ ಆಯಾ ಇಲಾಖೆಗಳಿಂದ ಅಭ್ಯರ್ಥಿಗಳ ಎಸಿಆರ್ಗಳ ಸಾರಾಂಶವನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.
1997ರಲ್ಲಿನ ನಿಬಂಧನೆಗಳ ಪ್ರಕಾರ ಕೇಂದ್ರ ಸರಕಾರ/ಕೇಂದ್ರ ಲೋಕ ಸೇವಾ ಆಯೋಗಕ್ಕೆ ಅರ್ಹತೆಯ ಕ್ರಮದಲ್ಲಿ ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.







